ಚಂದ್ರಬಾಬು ನಾಯ್ಡು
– ಪಿಟಿಐ
ಅಮರಾವತಿ: ಬಡತನ ನಿರ್ಮೂಲನೆ ಯೋಜನೆಯಡಿ 250 ಬಡ ಕುಟುಂಬಗಳನ್ನು ವೈಯಕ್ತಿಕವಾಗಿ ದತ್ತು ತೆಗೆದುಕೊಳ್ಳುವುದಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಶುಕ್ರವಾರ ಹೇಳಿದ್ದಾರೆ.
ಮಾರ್ಚ್ 30ರಂದು, ನಾಯ್ಡು ಅವರು 'ಪಿ 4 - ಮಾರ್ಗದರ್ಶಿ ಬಂಗಾರು ಕುಟುಂಬಂ' ಯೋಜನೆಗೆ ಚಾಲನೆ ನೀಡಿದ್ದರು.
ಇದರಡಿ ಬಡಕುಟುಂಬಗಳನ್ನು ಶ್ರೀಮಂತ ಮಾರ್ಗದರ್ಶಕರೊಂದಿಗೆ ಸಂಪರ್ಕಕ್ಕೆ ತರುವ ಮೂಲಕ ಅವರನ್ನು ಬಡತನದಿಂದ ಮೇಲೆತ್ತುವ ಗುರಿಯನ್ನು ಹೊಂದಲಾಗಿದೆ.
ಪಿ 4 ಯೋಜನೆಯು ಸಮಾಜದ ಅತ್ಯಂತ ಶ್ರೀಮಂತರು ಬಡ ಕುಟುಂಬಗಳನ್ನು ದತ್ತು ಪಡೆದು ಅವರ ಆರ್ಥಿಕ ಸ್ಥಿರತೆಯತ್ತ ಮಾರ್ಗದರ್ಶನ ಮಾಡಲು ಪ್ರೋತ್ಸಾಹಿಸುತ್ತದೆ. ಬಡವರಿಗೆ ನೆರವು ನೀಡಲು ಬದ್ಧರಾಗಿರುವ ಶ್ರೀಮಂತ ಜನರನ್ನು 'ಮಾರ್ಗದರ್ಶಿಗಳು' (ಮಾರ್ಗದರ್ಶಕರು) ಮತ್ತು ಫಲಾನುಭವಿಗಳನ್ನು 'ಬಂಗಾರು ಕುಟುಂಬ' (ಸುವರ್ಣ ಕುಟುಂಬ) ಎಂದು ಗೊತ್ತುಪಡಿಸಲಾಗುತ್ತದೆ.
ಈ ಯೋಜನೆಯಡಿ ಕುಪ್ಪಂನ 250 ಬಂಗಾರು ಕುಟುಂಬಗಳನ್ನು (ಬಡ ಕುಟುಂಬಗಳು) ದತ್ತು ತೆಗೆದುಕೊಳ್ಳುವುದಾಗ ಸಿಎಂ ನಾಯ್ಡು ಘೋಷಿಸಿದರು ಎಂದು ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಪಿ 4 ಯೋಜನೆಗಾಗಿ ನಾಯ್ಡು ಅವರು ಇಂದು ಲೋಗೊವನ್ನು ಅನಾವರಣಗೊಳಿಸಿದ್ದಾರೆ. ಇದಲ್ಲದೆ, ಪಿ4 ಅಡಿಯಲ್ಲಿ ಬಡ ಕುಟುಂಬಗಳನ್ನು ದತ್ತು ತೆಗೆದುಕೊಳ್ಳುವಲ್ಲಿ ತಮ್ಮ ಕುಟುಂಬ ಸದಸ್ಯರು ಸಹ ತಮ್ಮೊಂದಿಗೆ ಕೈಜೋಡಿಸುತ್ತಾರೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಪ್ರಪಂಚದಾದ್ಯಂತ ಇರುವ ತೆಲುಗು ವಲಸಿಗರು ಮತ್ತು ಕಾರ್ಪೊರೇಟ್ ಸಂಸ್ಥೆಗಳನ್ನು ಯೋಜನೆಯಡಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡಲು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಆಗಸ್ಟ್ 15 ರೊಳಗೆ 15 ಲಕ್ಷ 'ಬಂಗಾರು ಕುಟುಂಬ'ಗಳನ್ನು ದತ್ತು ಪಡೆಯುವ ಗುರಿಯನ್ನು ನಾಯ್ಡು ಒತ್ತಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.