ಅಮರಾವತಿ: ಹೂಡಿಕೆದಾರರನ್ನು ಆಕರ್ಷಿಸುವ ಉದ್ದೇಶದಿಂದ ದಿನದ ಗರಿಷ್ಠ ಕೆಲಸದ ಅವಧಿಯನ್ನು ಒಂದು ಗಂಟೆಯಷ್ಟು ಹೆಚ್ಚಳ ಮಾಡುವುದಕ್ಕೆ ಆಂಧ್ರಪ್ರದೇಶದ ಟಿಡಿಪಿ ನೇತೃತ್ವದ ಸರ್ಕಾರ ನಿರ್ಧರಿಸಿದೆ.
‘ಸದ್ಯ ಕೆಲಸದ ಅವಧಿ ದಿನಕ್ಕೆ 9 ಗಂಟೆ ಇದೆ. ಇದನ್ನು ದಿನಕ್ಕೆ 10 ಗಂಟೆಗೆ ಹೆಚ್ಚಿಸಲಾಗುವುದು. ನೂತನ ವ್ಯವಸ್ಥೆಯನ್ನು ಹೂಡಿಕೆದಾರರು ಮತ್ತು ಕಾರ್ಮಿಕ ಸ್ನೇಹಿಯನ್ನಾಗಿ ಮಾಡುವ ಸಂಬಂಧ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರಲಾಗುವುದು’ ಎಂದು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಕೆ.ಪಾರ್ಥಸಾರಥಿ ಹೇಳಿದ್ದಾರೆ.
‘ಇಂತಹ ತಿದ್ದುಪಡಿಗಳಿಂದ, ಹೂಡಿಕೆದಾರರು ರಾಜ್ಯದತ್ತ ಮುಖ ಮಾಡುವರು. ನೂತನ ನಿಯಮಗಳು ಕೂಡ ಕಾರ್ಮಿಕ ಸ್ನೇಹಿಯಾಗರಲಿದ್ದು, ಹೂಡಿಕೆ ಹೆಚ್ಚಳಕ್ಕೆ ಅನುಕೂಲವಾಗಲಿವೆ. ಜಾಗತಿಕ ಮಟ್ಟದ ನಿಯಮಗಳಿಗೆ ಅನುಗುಣವಾಗಿಯೇ ಈ ತಿದ್ದುಪಡಿಗಳನ್ನು ತರಲಾಗುತ್ತಿದೆ’ ಎಂದು ಪಾರ್ಥಸಾರಥಿ ಹೇಳಿದ್ದಾರೆ.
ಸಿಪಿಐ ಟೀಕೆ
ರಾಜ್ಯ ಸರ್ಕಾರದ ಉದ್ದೇಶಿತ ನಡೆಯನ್ನು ಸಿಪಿಐ ಟೀಕಿಸಿದೆ.
‘ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಎನ್ಡಿಎ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ’ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಕೆ.ರಾಮಕೃಷ್ಣ ಟೀಕಿಸಿದ್ದಾರೆ.
‘ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರುವುದನ್ನು ವಿರೋಧಿಸಿ ಎಲ್ಲ ಟ್ರೇಡ್ ಯೂನಿಯನ್ಗಳು ಜುಲೈ 9ರಂದು ದೇಶದಾದ್ಯಂತ ಪ್ರತಿಭಟನೆ ನಡೆಸಲಿವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.