ನಾರಾಯಣಪುರ: ಚಿತ್ತೂರು ಜಿಲ್ಲೆಯ ನಾರಾಯಣಪುರ ಎಂಬಲ್ಲಿ ಸಾಲವನ್ನು ಮರಳಿ ಪಾವತಿಸಲಿಲ್ಲ ಎಂಬ ಆರೋಪದ ಮೇಲೆ ಗ್ರಾಮಸ್ಥರು, ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಸಾರ್ವಜನಿಕವಾಗಿ ಅವಮಾನಿಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ತಿಮ್ಮರಾಯಪ್ಪ ಎನ್ನುವವರು ಗ್ರಾಮದ ಮುನಿಕಣ್ಣಪ್ಪ ಎನ್ನುವವರ ಬಳಿ ಸುಮಾರು ₹80 ಸಾವಿರ ಸಾಲ ಮಾಡಿದ್ದರು. ನಂತರ ಅವರ ಕುಟುಂಬವು ಬೆಂಗಳೂರಿಗೆ ವಲಸೆ ಹೋಗಿತ್ತು. ಗ್ರಾಮದಲ್ಲಿದ್ದ ಶಾಲೆಯಲ್ಲಿ ಮಕ್ಕಳ ಟಿಸಿ ಪಡೆಯಲೆಂದು ಬಂದಿದ್ದ ತಿಮ್ಮರಾಯಪ್ಪನ ಹೆಂಡತಿ ಸಿರಿಶಾಗೆ ಸಾಲ ಮರುಪಾವತಿಸುವಂತೆ ದುಂಬಾಲು ಬಿದ್ದಿರುವ ಸಾಲಗಾರರು, ಗಂಡನನ್ನು ಕರೆಸುವಂತೆ ಒತ್ತಾಯಿಸಿ ಅವರನ್ನು ಸಾರ್ವಜನಿಕವಾಗಿ ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಕುಪ್ಪಂ ಡಿಎಸ್ಪಿ ಬಿ. ಪಾರ್ಥಸಾರಥಿ ಪಿಟಿಐಗೆ ಮಾಹಿತಿ ನೀಡಿದ್ದಾರೆ
ಆರು ತಿಂಗಳ ಹಿಂದೆಯೇ ಬೆಂಗಳೂರಿನಲ್ಲಿ ಗಂಡ ನನ್ನನ್ನ ಬಿಟ್ಟು ಹೋಗಿದ್ದಾರೆ. ಅವರ ಸಾಲಕ್ಕೂ ನನಗೂ ಸಂಬಂಧವಿಲ್ಲ ಎಂದು ಸಿರಿಶಾ ಅವರು ಪೊಲೀಸರಿಗೆ ಹೇಳಿದ್ದಾರೆ.
ಆದರೆ, ದಂಪತಿಗಳು ಇನ್ನೂ ಜೊತೆಯಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಘಟನೆಯನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಖಂಡಿಸಿದ್ದು, ‘ಪೊಲೀಸರಿಂದ ಘಟನೆಯ ಕುರಿತು ಸಮಗ್ರ ಮಾಹಿತಿ ಪಡೆದಿದ್ದು, ಅಮಾನವೀಯ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಲು ಸೂಚಿಸಿದ್ದೇನೆ. ಸಂತ್ರಸ್ತರ ಕುಟುಂಬಕ್ಕೆ ಸಂಪೂರ್ಣ ನೆರವು ನೀಡಲು ಸಿದ್ದರಿದ್ದೇವೆ’ ಎಂದು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.