ಪಿ.ವಿ. ಅನ್ವರ್ , ರಾಹುಲ್ ಗಾಂಧಿ
ತಿರುವನಂತಪುರ(ಕೇರಳ): ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಟಿಎಂಸಿ ಸೇರ್ಪಡೆಯಾಗಿರುವ ಪಿ.ವಿ.ಅನ್ವರ್ ಅವರು ‘ಡಿಎನ್ಎ’ ಹೇಳಿಕೆ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಲ್ಲಿ ಕ್ಷಮೆಯಾಚಿಸಿದ್ದಾರೆ.
ಕಳೆದ ವರ್ಷ ಪಾಲಕ್ಕಾಡ್ನಲ್ಲಿ ನಡೆದ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಮಾತನಾಡಿದ್ದ ಅನ್ವರ್ ಅವರು, ನೆಹರೂ ವಂಶಸ್ಥರಿಂದ ನಿರೀಕ್ಷಿಸುವ ಗುಣಮಟ್ಟವನ್ನು ರಾಹುಲ್ ಗಾಂಧಿ ಅವರು ಪ್ರದರ್ಶಿಸುತ್ತಿಲ್ಲ. ಈ ಕಾರಣಕ್ಕೆ ಅವರ ಡಿಎನ್ಎ ಅನ್ನು ಪರೀಕ್ಷಿಸಬೇಕಿದೆ’ ಎಂದು ಹೇಳಿದ್ದರು.
‘ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ವಿರುದ್ಧ ಕೇಂದ್ರ ತನಿಖಾ ತಂಡಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದ್ದು, ಬಿಜೆಪಿಯೇತರ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ತನಿಖಾ ತಂಡಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವ ಕಾಂಗ್ರೆಸ್ ಪಕ್ಷದ ನಿಲುವಿಗೆ ವಿರುದ್ಧವಾಗಿದೆ. ಹಾಗಾಗಿ ರಾಹುಲ್ ಗಾಂಧಿ ಅವರ ರಾಜಕೀಯ ಡಿಎನ್ಎ ಪರೀಕ್ಷಿಸುವ ಅಗತ್ಯವಿದೆ ಎಂದು ನಾನು ಹೇಳಿದ್ದೆ. ನಾನು ಜೈವಿಕ ಡಿಎನ್ಎ ಬಗ್ಗೆ ಮಾತನಾಡಿಲ್ಲ. ನೆಹರೂ ಕುಟುಂಬದೊಂದಿಗೆ ನಿಕಟ ಸಂಪರ್ಕ ಹೊಂದಿರುವ ಕುಟುಂಬದಿಂದ ನಾನು ಬಂದಿದ್ದು, ಅಂತಹ ಹೇಳಿಕೆ ನೀಡಲು ಸಾಧ್ಯವೂ ಇಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ’ ಎಂದು ಅನ್ವರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇನ್ನು, ಸಿಲ್ವರ್ಲೈನ್ ಸೆಮಿ ಹೈಸ್ಪೀಡ್ ರೈಲು ಯೋಜನೆ ಸಂಬಂಧ ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್ ವಿರುದ್ಧ ₹150 ಕೋಟಿ ಲಂಚ ಆರೋಪ ಮಾಡಿರುವ ಬಗ್ಗೆಯೂ ಕ್ಷಮೆಯಾಚಿಸಿದ್ದಾರೆ.
ಅನ್ವರ್ ಅವರ ಕ್ಷಮೆಯಾಚನೆಯನ್ನು ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ನೊಂದಿಗೆ ಸುಗಮ ಮೈತ್ರಿಗೆ ದಾರಿ ಮಾಡಿಕೊಡುವ ಪ್ರಯತ್ನವೆಂದು ಪರಿಗಣಿಸಲಾಗಿದೆ.
ಎಡಪಕ್ಷಗಳ ಬೆಂಬಲದೊಂದಿಗೆ ನಿಲಂಬೂರ್ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ವರ್ಧಿಸಿದ್ದ ಅನ್ವರ್, ಎರಡು ಬಾರಿ ಶಾಸಕರಾಗಿದ್ದರು. ಸೋಮವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಟಿಎಂಸಿ ಸೇರ್ಪಡೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.