ಅಮರಾವತಿ(ಪಿಟಿಐ): ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವ ಸರ್ಕಾರದ ಎಲ್ಲಾ 24 ಮಂದಿ ಸಚಿವರು ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
ಮುಖ್ಯಮಂತ್ರಿ ತಮ್ಮ ಸಂಪುಟ ಪುನರ್ರಚಿಸಲು ಅವಕಾಶ ಕಲ್ಪಿಸಲು ಎಲ್ಲಾ ಸಚಿವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದು, ಏಪ್ರಿಲ್ 11ರಂದು ಹೊಸ ಸಚಿವರುಸಿಎಂ ಜಗನ್ ಅವರ ಸಂಪುಟ ಸೇರಲಿದ್ದಾರೆ. ಇದರಲ್ಲಿ ಕನಿಷ್ಠ ನಾಲ್ವರು ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಹೊಸ ಸಂಪುಟ ರಚನೆಯಲ್ಲಿ ಜಾತಿ ಲೆಕ್ಕಾಚಾರ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
2019ರ ಮೇ 30ರಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಜಗನ್ ಮೋಹನ್ ರೆಡ್ಡಿ ಅವರು ಎರಡೂವರೆ ವರ್ಷಗಳ ಬಳಿಕ ತಮ್ಮ ಸಂಪುಟವನ್ನು ಪುನರ್ ರಚಿಸುತ್ತೇನೆ ಹಾಗೂ ಹೊಸ ತಂಡ ರಚಿಸಿಕೊಳ್ಳುತ್ತೇನೆ ಎಂದು ಘೋಷಿಸಿದ್ದರು. ಈ ಪ್ರಕಾರ 2021ರ ಡಿಸೆಂಬರ್ 8ರಂದು ಜಗನ್ ಅವರು ಸಂಪುಟ ಪುನರ್ ರಚಿಸಬೇಕಿತ್ತು. ಆದರೆ ಕೊರೊನಾ ಸೇರಿ ಇನ್ನಿತರ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.