ADVERTISEMENT

ಕೃಷ್ಣಾ ನದಿ ನೀರು ಹಂಚಿಕೆ: ಆಂಧ್ರ–ತೆಲಂಗಾಣದ ವಿವಿಧೆಡೆ ಉದ್ವಿಗ್ನ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 19:14 IST
Last Updated 1 ಜುಲೈ 2021, 19:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್: ಕೃಷ್ಣಾ ನದಿ ನೀರಿನ ಹಂಚಿಕೆ ಕುರಿತಂತೆ ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವಣ ವಿವಾದದ ಹಿನ್ನೆಲೆಯಲ್ಲಿ ಶ್ರೀಶೈಲಂ, ನಾಗಾರ್ಜುನ ಸಾಗರ ಮತ್ತು ಪುಲಿಚಿಂತಲಾದ ಜಲವಿದ್ಯುತ್‌ ಯೋಜನೆಗಳ ಬಳಿ ಗುರುವಾರ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

ಯೋಜನಾ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಉಭಯ ಮಾರ್ಗಗಳಲ್ಲಿ ಪೊಲೀಸ್‌ನ ಬಿಗಿ ಬಂದೋಬಸ್ತ್‌ ಇತ್ತು. ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿ 2015ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಚಂದ್ರಬಾಬು ನಾಯ್ಡು ಮತ್ತು ಕೆ.ಚಂದ್ರಶೇಖರ ರಾವ್ ಬಿಗಿ ನಿಲುವು ಕೈಗೊಂಡ ನಂತರ ಪರಿಸ್ಥಿತಿ ಬಿಗಡಾಯಿಸಿದೆ.

ಆಂಧ್ರದ ಮುಖ್ಯಮಂತ್ರಿಯಾಗಿ ಜಗನ್‌ಮೋಹನ್‌ ರೆಡ್ಡಿ 2019ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಸೌಹಾರ್ದವಾಗಿ ವಿವಾದ ಬಗೆಹರಿಸಿಕೊಳ್ಳಲು ಒತ್ತು ನೀಡಿದ್ದರು. ಆದರೆ, ಮೇ 2020ರಲ್ಲಿ ರಾಯಲಸೀಮಾ ಏತನೀರಾವತಿ ಯೋಜನೆಗೆ ಶ್ರೀಶೈಲಂ ಜಲಾಶಯದಿಂದ 3 ಟಿ.ಎಂ.ಸಿ ನೀರು ಪಡೆಯುವ ವಿಷಯ ಸಮಸ್ಯೆಯನ್ನು ಮತ್ತೆ ಹೆಚ್ಚಿಸಿತ್ತು.

ADVERTISEMENT

ಆಗ, ಜಗನಮೋಹನ್‌ ರೆಡ್ಡಿ ಹಾಗೂ ಅವರ ತಂದೆ, ಮಾಜಿ ಮುಖ್ಯಮಂತ್ರಿ ವೈ.ಎಸ್.ಆರ್.ರೆಡ್ಡಿ ಅವರ ವಿರುದ್ಧವೂ ಆರೋಪ ಮಾಡಿದ್ದು, ತೆಲಂಗಾಣದ ಪಾಲಿನ ನೀರನ್ನು ಆಂಧ್ರಪ್ರದೇಶ ಕಳವು ಮಾಡುತ್ತಿದೆ ಎಂದು ಕೆಲ ಸಚಿವರು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.