ನವದೆಹಲಿ: ಮಧ್ಯಸ್ಥಿಕೆ ಮತ್ತು ರಾಜಿ ಕಾಯ್ದೆ (ತಿದ್ದುಪಡಿ) ಮಸೂದೆ 2021ಕ್ಕೆ ಧ್ವನಿಮತದ ಮೂಲಕ ರಾಜ್ಯಸಭೆ ಬುಧವಾರ ಅಂಗೀಕರಿಸಿತು.
ಈ ಮಸೂದೆಯನ್ನು ಲೋಕಸಭೆ ಫೆ. 12ರಂದು ಅಂಗೀಕರಿಸಿದೆ. ಸಂಸತ್ನ ಉಭಯ ಸದನಗಳಲ್ಲಿಯೂ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆತ ಕಾರಣ, ಈ ಸಂಬಂಧ ಕಳೆದ ವರ್ಷ ನವೆಂಬರ್ 4ರಂದು ಕೇಂದ್ರ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆ ರದ್ದಾಗಲಿದೆ.
ಮಸೂದೆ ಅಂಗೀಕರಿಸಿದ ನಂತರ ಉಪಸಭಾಪತಿ ಹರಿವಂಶ ಅವರು ರಾಜ್ಯಸಭೆ ಕಲಾಪವನ್ನು ಸೋಮವಾರದ ವರೆಗೆ ಮುಂದೂಡಿದರು.
ಇದಕ್ಕೂ ಮುನ್ನ, ಮಾತನಾಡಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್, ‘ ರಾಜಿ ಅಥವಾ ಮಧ್ಯಸ್ಥಿಕೆ ಮೂಲಕ ಪರಿಹಾರ ಪಡೆಯುವ ಪ್ರಕ್ರಿಯೆ ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿರಬೇಕು. ಸಂಧಾನದ ಹೆಸರಿನಲ್ಲಿ ತೆರಿಗೆದಾರರ ಹಣ ಪೋಲಾಗುವುದನ್ನು ತಡೆಗಟ್ಟುವ ಉದ್ದೇಶದಿಂದ ಈ ಕಾಯ್ದೆಗೆ ತಿದ್ದುಪಡಿ ತರಲಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.