ADVERTISEMENT

ವಿವಾದಗಳ ಪರಿಹಾರಕ್ಕೆ ಮಧ್ಯಸ್ಥಿಕೆ ಅತ್ಯುತ್ತಮ ಮಾರ್ಗ: ಸಿಜೆಐ

ಪಿಟಿಐ
Published 19 ಮಾರ್ಚ್ 2022, 13:55 IST
Last Updated 19 ಮಾರ್ಚ್ 2022, 13:55 IST
ಎನ್‌.ವಿ.ರಮಣ
ಎನ್‌.ವಿ.ರಮಣ   

ನವದೆಹಲಿ (ಪಿಟಿಐ): ‘ತಕ್ಷಣವೇ ಪರಿಹಾರ ನೀಡುವ ಮಧ್ಯಸ್ಥಿಕೆ ಅಥವಾ ರಾಜಿ ಸಂಧಾನವು ವಿವಾದಗಳಿಗೆ ಪರಿಹಾರ ಕಂಡುಕೊಳ್ಳಲುಜಾಗತಿಕವಾಗಿ ಇರುವ ಅತ್ಯುತ್ತಮ ಮಾರ್ಗ’ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅಭಿಪ್ರಾಯಪಟ್ಟಿದ್ದಾರೆ.

ದುಬೈನಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನದ ನಾಲ್ಕನೇ ಅವೃತ್ತಿಯಲ್ಲಿ ಅವರು ಶನಿವಾರ‘ಜಾಗತೀಕರಣದ ಯುಗದಲ್ಲಿ ಮಧ್ಯಸ್ಥಿಕೆ’ ವಿಷಯ ಕುರಿತು ಮಾತನಾಡಿದರು. ‘ಜಾಗತೀಕರಣದ ಉದ್ದೇಶ ಸಾಧನೆಗೆ ಅಯಾ ನೆಲದ ಕಾನೂನುಗಳನ್ನು ಜಾಗತಿಕವಾಗಿ ಗೌರವಿಸುವುದೂ ಅಗತ್ಯ’ ಎಂದು ಅವರು ಪ್ರತಿಪಾದಿಸಿದರು.

‘ಜಗತ್ತಿನಲ್ಲಿ ಈ ನೆಲದ ಕಾನೂನುಗಳಿಗೆ ಬದ್ಧವಾದ ಸಂಸ್ಥೆಗಳ ಸ್ಥಾಪನೆಯಿಂದ ಮಾತ್ರವೇ ನಂಬಿಕೆ ಉಳಿಯುವುದು ಸಾಧ್ಯ. ನೆಲದ ಕಾನೂನು ಮತ್ತು ಮಧ್ಯಸ್ಥಿಕೆ ನಡುವೆ ಪರಸ್ಪರ ತಿಕ್ಕಾಟ ಇರುವುದಿಲ್ಲ. ಈ ಎರಡರ ಉದ್ದೇಶವೂ ನ್ಯಾಯ ಸ್ಥಾಪಿಸುವುದೇ ಆಗಿದೆ. ಭಾರತದಲ್ಲಿ ಕೋರ್ಟ್‌ಗಳು ಮಧ್ಯಸ್ಥಿಕೆ ಪರವಾದ ನಿಲುವುಗಳಿಗೆ ಹೆಸರಾಗಿವೆ. ಮಧ್ಯಸ್ಥಿಕೆ ನಡೆಸಲು ಕೋರ್ಟ್‌ಗಳು ನೆರವಾಗಲಿವೆ’ ಎಂದು ಹೇಳಿದರು.

ADVERTISEMENT

‘ಮಧ್ಯಸ್ಥಿಕೆಯ ಸಂಸ್ಕೃತಿಯನ್ನು ಪ್ರೋತ್ಸಾಹಿಸುವುದು ಸುಲಭದ ಕೆಲಸವಲ್ಲ. ಮಧ್ಯಸ್ಥಿಕೆ ಪರವಾದ ನೀತಿಯಿಂದಲೇ ಇದು ಸಾಧ್ಯವಾಗದು. ಈ ನಿಟ್ಟಿನಲ್ಲಿ ಕೆಲ ನವೀನ ಕ್ರಮಗಳನ್ನು ಅನುಸರಿಸುವುದು ಅಗತ್ಯ. ಕೆಲವೊಮ್ಮೆ ಸರ್ಕಾರ ಅಥವಾ ಭಾಗಿದಾರ ವ್ಯಕ್ತಿಗಳು ಮಧ್ಯಸ್ಥಿಕೆಯಲ್ಲಿ ಮೂಡಿದ ಪರಿಹಾರಕ್ರಮವು ಸಾರ್ವಜನಿಕ ನೀತಿ, ಕಾನೂನಿಗೆ ವಿರುದ್ಧವಾಗಿದ್ದು, ಜಾರಿ ಅಸಾಧ್ಯ ಎಂಬ ನಿಲುವಿಗೆ ಬರುತ್ತವೆ. ಇಂಥ ಪ್ರಕರಣಗಳನ್ನು ನಿಭಾಯಿಸಲು ವಿಶೇಷ ವ್ಯವಸ್ಥೆ ರೂಪಿಸುವುದು ಅಗತ್ಯವಾಗಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಅವರು ಹೇಳಿದರು.

‘ವಾಣಿಜ್ಯ ಮತ್ತು ಹೂಡಿಕೆ ಒಪ್ಪಂದ ಪ್ರಕರಣಗಳ ಪೂರ್ವಭಾವಿ ಪರಿಶೀಲನೆಗೆ ವಿಶೇಷ ಪ್ರಾಧಿಕಾರ ರಚಿಸುವುದು ಒಂದು ಪರಿಹಾರ ಮಾರ್ಗವಾಗಬಹುದು. ಇದನ್ನು ನಾನು ಸಲಹೆಯಾಗಿ ಹೇಳುತ್ತಿಲ್ಲ. ಹೀಗೆ, ಪರಿಶೀಲಿಸುವುದು ಕಡ್ಡಾಯವೂ ಅಲ್ಲ. ಪರಿಶೀಲಿಸುವುದು ಕೂಡ ಉಭಯ ಭಾಗಿದಾರರ ಸಮ್ಮತಿಗೆ ಒಳಪಟ್ಟಿರಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.