
ಆರಿಹಾ ತಾಯಿ ಧಾರ
ನವದೆಹಲಿ: ನಾಲ್ಕೂವರೆ ವರ್ಷಗಳಿಗೂ ಹೆಚ್ಚು ಅವಧಿಯಿಂದ ಜರ್ಮನಿಯ ಪಾಲನಾ ಕೇಂದ್ರದಲ್ಲಿರುವ ಭಾರತೀಯ ಬಾಲಕಿ ಅರಿಹಾ ಶಾಳನ್ನು ಸ್ವದೇಶಕ್ಕೆ ವಾಪಸ್ ಕರೆತರುವ ಸಂಬಂಧ ಮಧ್ಯಪ್ರವೇಶಿಸುವಂತೆ ಸಿಪಿಎಂ ಸಂಸದ ಜಾನ್ ಬ್ರಿಟ್ಟಾಸ್ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
‘ಮಗುವಿಗೆ ಈಗ ಐದು ವರ್ಷಗಳು ತುಂಬುತ್ತಿದೆ. ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಯಾವುದೇ ಸಾಕ್ಷ್ಯ, ಪುರಾವೆಗಳಿಲ್ಲ ಎಂದು ಜರ್ಮನ್ ಆಸ್ಪತ್ರೆ ಹೇಳಿದೆ. ನ್ಯಾಯಾಲಯ ನೇಮಿಸಿದ್ದ ಮನಃಶಾಸ್ತ್ರಜ್ಞರು ಮಗುವನ್ನು ಪೋಷಕರ ಸುಪರ್ದಿಗೆ ಕೊಡಬಹುದೆಂದು ಶಿಫಾರಸು ಮಾಡಿದ್ದಾರೆ. ಆದರೂ ಮಗುವನ್ನು ಇನ್ನೂ ಜರ್ಮನಿಯ ಮಕ್ಕಳ ಪಾಲನಾ ಕೇಂದ್ರದಲ್ಲಿಯೇ ಇಡಲಾಗಿದೆ’ ಎಂದು ಬ್ರಿಟ್ಟಾಸ್ ದೂರಿದ್ದಾರೆ.
ಇದೇ 12 ಮತ್ತು 13ರಂದು ಜರ್ಮನಿಯ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರು ಎರಡು ದಿನಗಳ ಭಾರತ ಭೇಟಿಗೆ ಆಗಮಿಸುತ್ತಿರುವ ಸಂದರ್ಭದಲ್ಲೇ ಬ್ರಿಟ್ಟಾಸ್ ಅವರು ವಿದೇಶಾಂಗ ಸಚಿವರಿಗೆ ಪತ್ರ ಬರೆದಿದ್ದಾರೆ.
ಆರಿಹಾ ಶಾ ಆರು ತಿಂಗಳ ಮಗುವಾಗಿದ್ದಾಗ, ಪೋಷರಿಂದ ಆಕಸ್ಮಿಕವಾಗಿ ಗಾಯಗೊಂಡಿದ್ದರು. ‘ಮಗುವಿನ ಮೇಲೆ ದೈಹಿಕ ದೌರ್ಜನ್ಯ ನಡೆದಿದೆ’ ಎಂಬ ಆರೋಪದ ಮೇಲೆ ಜರ್ಮನಿ ಅಧಿಕಾರಿಗಳು 23ರ ಸೆಪ್ಟೆಂಬರ್ 2021ರಂದು ಮಗುವನ್ನು ವಶಕ್ಕೆ ಪಡೆದು, ಪಾಲನಾ ಕೇಂದ್ರಕ್ಕೆ ಕಳುಹಿಸಿದ್ದರು.