ADVERTISEMENT

ಬೀದಿನಾಯಿ ಹಾವಳಿ: ಶಾಲಾ ಮಕ್ಕಳಿಗೆ ಬಂದೂಕುಧಾರಿಯ ರಕ್ಷಣೆ

ಪಿಟಿಐ
Published 16 ಸೆಪ್ಟೆಂಬರ್ 2022, 14:14 IST
Last Updated 16 ಸೆಪ್ಟೆಂಬರ್ 2022, 14:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಾಸರಗೋಡು: ಬೀದಿ ನಾಯಿಗಳ ಉಪಟಳದಿಂದ ಬೇಸತ್ತು ಶಾಲಾ ಮಕ್ಕಳಿಗೆ ರಕ್ಷಣೆ ನೀಡಲುಇಲ್ಲಿನ ಬೇಕಲ ನಿವಾಸಿಸಮೀರ್‌ ಎಂಬುವವರು ಏರ್‌ಗನ್‌ ಮೊರೆ ಹೋಗಿದ್ದಾರೆ.

ಕೇರಳದಾದ್ಯಂತ ಬೀದಿನಾಯಿಗಳ ಹಾವಳಿ ಹೆಚ್ಚಾಗುತ್ತಿರುವ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆಯೇ ಸಮೀರ್‌ ಅವರು ಏರ್‌ಗನ್ ಹಿಡಿದು ವಿದ್ಯಾರ್ಥಿಗಳ ಗುಂಪೊಂದನ್ನು ಶಾಲೆಗೆ ಕರೆದೊಯ್ಯುತ್ತಿರುವ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

‘ನಾವು ವಾಸಿಸುವ ಪ್ರದೇಶದಲ್ಲಿ ಬೀದಿ ನಾಯಿಗಳ ಉಪಟಳ ವಿಪರೀತವಾಗಿದೆ. ಈಚೆಗೆ ಮದರಸಾ ವಿದ್ಯಾರ್ಥಿಗೆ ನಾಯಿ ಕಚ್ಚಿತ್ತು. ಬಳಿಕ ಅವುಗಳ ಭೀತಿಯಿಂದ ನನ್ನ ಮಕ್ಕಳು ಸೇರಿದಂತೆ ಈ ಪ್ರದೇಶದ ಮಕ್ಕಳು ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದರು. ಈ ಕಾರಣಕ್ಕೆ ಅನಿವಾರ್ಯವಾಗಿ ಏರ್‌ಗನ್‌ನ ಮೊರೆ ಹೋಗಬೇಕಾಯಿತು. ಮಕ್ಕಳ ಮೇಲೆ ದಾಳಿ ಮಾಡಲು ಬಂದರೆ ನಾಯಿಗಳಿಗೆ ಶೂಟ್‌ ಮಾಡುತ್ತೇನೆ’ ಎಂದು ಸಮೀರ್‌ ತಿಳಿಸಿದ್ದಾರೆ.

ADVERTISEMENT

‘ಏರ್‌ಗನ್‌ ಇಟ್ಟುಕೊಳ್ಳಲು ಪರವಾನಗಿ ಅಗತ್ಯವಿಲ್ಲ. ನಾನು ಯಾವುದೇ ನಾಯಿಯನ್ನು ಸಾಯಿಸಿಲ್ಲ, ಆದ್ದರಿಂದ ಕಾನೂನು ಕ್ರಮಕ್ಕೆ ಭಯಪಡುವುದಿಲ್ಲ. ಆತ್ಮರಕ್ಷಣೆಗಾಗಿ ಏರ್‌ಗನ್‌ ಇಟ್ಟುಕೊಂಡಿದ್ದೇನೆ’ ಎಂದೂ ಸಮೀರ್‌ ಹೇಳಿದ್ದಾರೆ.

ಸಮೀರ್‌ ಅವರು ಏರ್‌ಗನ್‌ ಹಿಡಿದು ವಿದ್ಯಾರ್ಥಿಗಳೊಂದಿಗೆ ತೆರಳುತ್ತಿರುವ ದೃಶ್ಯವನ್ನು ಅವರ ಮಗ ಚಿತ್ರೀಕರಿಸಿದ್ದು, ಬಳಿಕ ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಮಾಡಲಾಗಿತ್ತು.

ಈ ಕುರಿತು ಯಾವುದೇ ದೂರು ಲಭಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.