ADVERTISEMENT

ಯುದ್ಧಭೂಮಿಗೆ ಮಹಿಳೆಯರ ನಿಯೋಜನೆ ಕಷ್ಟ: ಬಿಪಿನ್ ರಾವತ್

ಸೇನಾಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಪುನರುಚ್ಚಾರ

ಪಿಟಿಐ
Published 16 ಡಿಸೆಂಬರ್ 2018, 20:15 IST
Last Updated 16 ಡಿಸೆಂಬರ್ 2018, 20:15 IST
ಬಿಪಿನ್ ರಾವತ್
ಬಿಪಿನ್ ರಾವತ್   

ನವದೆಹಲಿ: ಯುದ್ಧಭೂಮಿಯಲ್ಲಿ ಕರ್ತವ್ಯ ನಿರ್ವಹಿಸಲು ಮಹಿಳೆಯರನ್ನು ನೇಮಕ ಮಾಡಲು ಇರುವ ಕಷ್ಟಗಳ ಕುರಿತು ಸೇನಾಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತೆ ಮಾತನಾಡಿದ್ದಾರೆ.

‘ಯುದ್ಧಭೂಮಿಯಲ್ಲಿ ಯೋಧರು ಮೃತಪಡುವ ಸಾಧ್ಯತೆಗಳು ಇರುತ್ತವೆ. ಮಕ್ಕಳನ್ನು ಹೊಂದಿರುವ ಮಹಿಳೆಯರು ಸಾಯುವುದೇ ಇಲ್ಲ ಎಂದು ನಾನು ಹೇಳುವುದಿಲ್ಲ. ರಸ್ತೆ ಅಪಘಾತದಲ್ಲಿಯೂ ಅವರು ಮೃತಪಡಬಹುದು. ಆದರೆ, ಮಹಿಳೆಯರು ಯುದ್ಧಭೂಮಿಯಲ್ಲಿ ಮೃತಪಟ್ಟು, ಅವರ ಮೃತದೇಹ ಮನೆಗೆ ವಾಪಸಾಗುವುದನ್ನು ನೋಡಲು ನಮ್ಮ ದೇಶ ಸಿದ್ಧವಿಲ್ಲ’ ಎಂದು ಸುದ್ದಿಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾವತ್ ಹೇಳಿದ್ದಾರೆ.

‘ಸೇನೆಯಲ್ಲಿಎಂಜಿನಿಯರ್‌ಗಳಾಗಿ ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ.ಸ್ಫೋಟಕಗಳನ್ನು ಹುಗಿಯುವ ಮತ್ತು ಪತ್ತೆ ಮಾಡಿ ಹೊರತೆಗೆಯುವಂತಹ ಕಾರ್ಯಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ವಾಯುಪಡೆಯಲ್ಲಿನಮ್ಮ ಶಸ್ತ್ರಾಸ್ತ್ರ ವ್ಯವಸ್ಥೆಯ ನಿರ್ವ
ಹಣೆಯನ್ನು ಮಹಿಳಾ ಅಧಿಕಾರಿಗಳು ವಹಿಸಿಕೊಂಡಿದ್ದಾರೆ’ ಎಂದಿದ್ದಾರೆ.

ADVERTISEMENT

‘ಮಹಿಳೆಯರಿಗೆ ಯುದ್ಧರಂಗದಲ್ಲಿ ಕರ್ತವ್ಯ ನಿರ್ವಹಣೆಗೆ ಅವಕಾಶ ನೀಡಲು ಸೇನೆ ಸಿದ್ಧವಿಲ್ಲ ಎಂದಲ್ಲ. ಒಂದು ವೇಳೆ
ಮಹಿಳೆಯರಿಗೆಕಮಾಂಡರ್ ಹುದ್ದೆ ನೀಡಿದರೆ, ಅವರುದೀರ್ಘಾವಧಿಗೆತಮ್ಮ ಹೊಣೆಗಾರಿಕೆಯಿಂದದೂರ ಉಳಿಯಬಹುದೆ? ಕಮಾಂಡರ್ ಜವಾಬ್ದಾರಿ ನಿರ್ವಹಣೆ ಅವಧಿಯಲ್ಲಿ ಹೆರಿಗೆ ರಜೆ ನೀಡಲಾಗುವುದಿಲ್ಲ ಎಂದುನಿರ್ಬಂಧ ಹೇರಬಹುದೆ? ನಾನು ಹಾಗೆ ಹೇಳಿದರೆ ವಿವಾದ ಸೃಷ್ಟಿಯಾಗುತ್ತದೆ’ ಎಂದು ಹೇಳಿದ್ದಾರೆ.

‘ಸೇನೆಯಲ್ಲಿರುವ ಬಹುತೇಕ ಯೋಧರು ಗ್ರಾಮೀಣ ಪ್ರದೇಶಗಳಿಂದ ಬಂದವರಾಗಿದ್ದು, ಇವರು ಮಹಿಳಾ ಕಮಾಂಡರ್‌ಗಳು ತಮ್ಮನ್ನು ಮುನ್ನಡೆಸುವುದನ್ನು ಬಯಸುವುದಿಲ್ಲ’ ಎಂದೂ ರಾವತ್ ಹೇಳಿದ್ದಾರೆ.

‘ಬಟ್ಟೆ ಬದಲಾಯಿಸುವಾಗ ಇತರರು ತಮ್ಮನ್ನು ಇಣುಕುತ್ತಾರೆ ಎಂದು ಮಹಿಳಾ ಸೇನಾ ಅಧಿಕಾರಿಗಳು ದೂರು ನೀಡುವ ಸಾಧ್ಯತೆಯೂ ಇದೆ. ಆಗ ನಾವು ಅವರಿಗೆ ಪ್ರತ್ಯೇಕ ಪರದೆಯನ್ನು ಒದಗಿಸಬೇಕಾಗುತ್ತದೆ’ ಎಂದಿದ್ದಾರೆ.

ಟ್ವಿಟರ್‌ನಲ್ಲಿ ಆಕ್ರೋಶ
ರಾವತ್ ಹೇಳಿಕೆ ಟ್ವಿಟರ್‌ನಲ್ಲಿ ಆಕ್ರೋಶಕ್ಕೆ ಗುರಿಯಾಗಿದೆ. ರಾವತ್ ದೇಶಕ್ಕೇ ಅವಮಾನ ಮಾಡಿದ್ದಾರೆ ಎಂದು ಕೆಲವರು ಟೀಕಿಸಿದ್ದಾರೆ.

‘ಬಟ್ಟೆ ಬದಲಾಯಿಸುವಾಗ ಯೋಧರು ಇಣುಕುವ ಸಾಧ್ಯತೆ ಇರುವುದರಿಂದ ಮಹಿಳೆಯರಿಗೆ ಯುದ್ಧಭೂಮಿಯಲ್ಲಿ ಅವಕಾಶ ನೀಡಲಾಗದು ಎನ್ನುವ ಮೂಲಕ ಸೇನಾ ಮುಖ್ಯಸ್ಥರು ಸೇನೆ ಹಾಗೂ ದೇಶವನ್ನು ಮುಜುಗರಕ್ಕೀಡುಮಾಡಿದ್ದಾರೆ’ ಎಂದು ವಿಷ್ಣುಕಾಂತ್ ಶರ್ಮಾ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ತಮ್ಮಂತಹ ಯೋಧರು ಮಹಿಳೆಯರಿಗೆ ಖಾಸಗಿತನ ನೀಡಲಾಗದ್ದರ ಬಗ್ಗೆ ರಾವತ್ ಬೇಸರ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಮತ್ತು ಬುದ್ಧಿ ಇಲ್ಲದವರು ಕೊನೆಗೆ ಸೇನೆ ಸೇರಿದಾಗ ಹೀಗಾಗಲು ಸಾಧ್ಯ’ ಎಂದು ಲಿಂಡ್ಸೆ ಪೆರೆರಾ ಎಂಬುವವರು ವ್ಯಂಗ್ಯವಾಡಿದ್ದಾರೆ.

‘ರಾವತ್ ಹೇಳಿಕೆ ನಿಜಕ್ಕೂ ಆಘಾತಕರ. ಅವರೀಗ ಸೇನೆ ಮತ್ತು ದೇಶವನ್ನು ಮುಜುಗರಕ್ಕೆ ಈಡುಮಾಡಲು ಶುರು ಮಾಡಿದ್ದಾರೆ. ಅವರ ನಿವೃತ್ತಿಗೆ ಇನ್ನೆಷ್ಟು ತಿಂಗಳುಗಳು ಇವೆ?’ ಎಂದು ಜಸ್ಕಿರಾತ್ ಸಿಂಗ್ ನಗರಾ ಕೇಳಿದ್ದಾರೆ.

ಇನ್ನೂ ಅನೇಕರು ರಾವತ್ ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.