ADVERTISEMENT

ಸೇನಾ ಶಿಬಿರದ ಮೇಲೆ ಭೂಕುಸಿತ: 3 ಸೇನಾ ಸಿಬ್ಬಂದಿ ಮೃತ, 6 ಸೈನಿಕರು ನಾಪತ್ತೆ

ಪಿಟಿಐ
Published 2 ಜೂನ್ 2025, 9:52 IST
Last Updated 2 ಜೂನ್ 2025, 9:52 IST
   

ಗ್ಯಾಂಗ್ಟಕ್/ ಕೋಲ್ಕತ್ತ (ಪಿಟಿಐ): ಈಶಾನ್ಯ ರಾಜ್ಯಗಳಲ್ಲಿ ಸೋಮವಾರವೂ ಮಳೆಯ ಆರ್ಭಟ ಮುಂದುವರಿದಿದ್ದು, ಸಿಕ್ಕಿಂನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೂವರು ಯೋಧರು ಮೃತಪಟ್ಟಿದ್ದಾರೆ. 

ಮಂಗನ್ ಜಿಲ್ಲೆಯ ಲಾಚೆನ್‌ ಪಟ್ಟಣದ ಸಮೀಪ ಭಾನುವಾರ ರಾತ್ರಿ 7ರ ಸುಮಾರಿಗೆ ಸೇನೆಯ ಶಿಬಿರ ಇರುವ ಜಾಗದಲ್ಲಿ ಭೂಕುಸಿತ ಸಂಭವಿಸಿದೆ. ಘಟನೆಯಲ್ಲಿ ಆರು ಯೋಧರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಮಂಗನ್ ಜಿಲ್ಲೆಯ ಲಾಚೆನ್‌ ಪಟ್ಟಣದ ಸಮೀಪ ಭಾನುವಾರ ರಾತ್ರಿ 7ರ ಸುಮಾರಿಗೆ ಸೇನೆಯ ಶಿಬಿರ ಇರುವ ಜಾಗದಲ್ಲಿ ಭೂಕುಸಿತ ಸಂಭವಿಸಿದೆ. ಘಟನೆಯಲ್ಲಿ ಆರು ಯೋಧರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ADVERTISEMENT

ಮೃತರ ಸಂಖ್ಯೆ 10ಕ್ಕೆ ಏರಿಕೆ: ಅರುಣಾಚಲ ಪ್ರದೇಶದ ಲೋಹಿತ್‌ ಜಿಲ್ಲೆಯಲ್ಲಿ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋದ ವ್ಯಕ್ತಿಯೊಬ್ಬರ ಮೃತದೇಹ ಸೋಮವಾರ ಪ‍ತ್ತೆಯಾಗಿದೆ. ಇದರಿಂದ ರಾಜ್ಯದಲ್ಲಿ ಮಳೆ ಸಂಬಂಧಿ ಅವಘಡಗಳಿಂದ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

23 ಜಿಲ್ಲೆಗಳ 156 ಗ್ರಾಮಗಳಲ್ಲಿ ಸಾವಿರಕ್ಕೂ ಅಧಿಕ ಮಂದಿ ತೊಂದರೆಗೆ ಸಿಲುಕಿದ್ದಾರೆ. ರಾಜ್ಯದಲ್ಲಿ ಬಹುತೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪಶ್ಚಿಮ ಕಾಮೆಂಗ್, ಕಾಮ್ಲೆ, ಲೋವರ್‌ ಮತ್ತು ಅಪ್ಪರ್ ಸುಬನಸಿರಿ, ದಿಬಾಂಗ್‌ ಕಣಿವೆ, ಲೋವರ್‌ ದಿಬಾಂಗ್‌ ಕಣಿವೆ, ಲೋಹಿತ್, ಚಾಂಗ್‌ಲಾಂಗ್‌ ಮತ್ತು ಲಾಂಗ್‌ಡಿಂಗ್ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ.

ಪೂರ್ವ ಕಾಮೆಂಗ್‌ ಜಿಲ್ಲೆಯ ಹೆದ್ದಾರಿಯಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಭೂಕುಸಿತದಲ್ಲಿ ಏಳು ಮಂದಿ ಬಲಿಯಾಗಿದ್ದರು. ಎರಡು ವಾಹನಗಳು ಮಣ್ಣಿನಡಿ ಹೂತುಹೋಗಿದ್ದು, ಅದರಲ್ಲಿದ್ದ ಎಲ್ಲ ಏಳೂ ಮಂದಿ ಮೃತಪಟ್ಟಿದ್ದರು.

ಮಣಿಪುರ: 3365 ಮನೆಗಳಿಗೆ ಹಾನಿ

* ಮಣಿಪುರದಲ್ಲಿ ಪ್ರವಾಹದಿಂದ 19 ಸಾವಿರಕ್ಕೂ ಅಧಿಕ ಮಂದಿ ತೊಂದರೆಗೆ ಸಿಲುಕಿದ್ದು 3365 ಮನೆಗಳಿಗೆ ಹಾನಿಯಾಗಿವೆ

* ಇಂಫಾಲ್‌ ಪೂರ್ವ ಜಿಲ್ಲೆ ಸೇರಿದಂತೆ ವಿವಿಧೆಡೆ 31 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.

* ಮಣಿಪುರದಲ್ಲಿ ಕಳೆದ ನಾಲ್ಕು ದಿನಗಳಲ್ಲಿ 47 ಭೂಕುಸಿತ ಘಟನೆಗಳು ವರದಿಯಾಗಿವೆ

* ಮಿಜೋರಾಂನಲ್ಲಿ ಸೋಮವಾರವೂ ಎಲ್ಲ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು

* ಸಿಕ್ಕಿಂನ ಲಾಚುಂಗ್‌ನಲ್ಲಿ ಸಿಲುಕಿದ್ದ 100ಕ್ಕೂ ಹೆಚ್ಚು ಪ್ರವಾಸಿಗರನ್ನು ರಕ್ಷಿಸಲಾಗಿದೆ

ಅಸ್ಸಾಂ: ಭಾರಿ ಮಳೆ ಸಾಧ್ಯತೆ

ಅಸ್ಸಾಂನಲ್ಲಿ ಸೋಮವಾರವೂ ಪ್ರವಾಹ ಪರಿಸ್ಥಿತಿ ತಲೆದೋರಿದ್ದು ರಾಜ್ಯದ ಹಲವು ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಸಾಧಾರಣ ಹಾಗೂ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.  ಮಳೆ ಸಂಬಂಧಿ ಅವಘಡಗಳಿಂದ ಕಛಾರ್ ಮತ್ತು ಶ್ರೀಭೂಮಿ ಜಿಲ್ಲೆಗಳಲ್ಲಿ ಮತ್ತಿಬ್ಬರು ಸತ್ತಿದ್ದು ಕಳೆದ ಮೂರು ದಿನಗಳಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ಅಸ್ಸಾಂ ರಾಜ್ಯದ ವಿಪತ್ತು ನಿಯಂತ್ರಣ ಪ್ರಾಧಿಕಾರ ತಿಳಿಸಿದೆ. ಪ್ರವಾಹದಿಂದಾಗಿ ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ತೊಂದರೆಗೆ ಒಳಗಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.