ಲಖನೌ:ಬಾಬರಿಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ಸೇರಿ 9 ಆರೋಪಿಗಳ ಹೇಳಿಕೆಗಳನ್ನು ವಿಡಿಯೊ ಕಾನ್ಫರೆನ್ಸ್ ಮುಖಾಂತರ ದಾಖಲಿಸಲು ಅಗತ್ಯವಾದ ವ್ಯವಸ್ಥೆ ರೂಪಿಸಲು ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಕೇಂದ್ರಕ್ಕೆ (ಎನ್ಐಸಿ)ಸಿಬಿಐ ವಿಶೇಷ ನ್ಯಾಯಾಲಯವು ಶನಿವಾರ ಸೂಚಿಸಿದೆ.
‘ಈ ಆದೇಶದೊಂದಿಗೆ ಲಗತ್ತಿಸಿರುವ ಪಟ್ಟಿಯನ್ನು ಆಧರಿಸಿ, ಆರೋಪಿಗಳ ಮನೆಯಲ್ಲೇ ವಿಡಿಯೊ ಕಾನ್ಫರೆನ್ಸ್ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು ಎಂದು ಎನ್ಐಸಿಗೆ ಪತ್ರ ರವಾನಿಸಲು’ ನ್ಯಾಯಾಧೀಶರಾದ ಎಸ್.ಕೆ.ಯಾದವ್ ಸೂಚಿಸಿದ್ದಾರೆ.
ಬಿಜೆಪಿ ಹಿರಿಯ ನಾಯಕರಾದ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಮಹಂತ್ ನೃತ್ಯ ಗೋಪಾಲ್ ದಾಸ್, ಆಚಾರ್ಯ ಧರ್ಮೇಂದ್ರ ದೇವ್, ಆರ್.ಎನ್.ಶ್ರೀವಾತ್ಸವ, ಜೈ ಭಗವಾನ್ ಗೋಯಲ್, ಅಮರ್ ನಾಥ್ ಗೋಯಲ್ ಮತ್ತು ಸುಧೀರ್ ಕಕ್ಕಡ್ ಅವರ ಹೆಸರು ಈ ಪಟ್ಟಿಯಲ್ಲಿದೆ. ಇವರಿಗೆ ಕೇಳಲು 1,000 ಪ್ರಶ್ನೆಗಳನ್ನು ನ್ಯಾಯಾಲಯವು ಸಿದ್ಧಪಡಿಸಿದೆ. ಸುಪ್ರೀಂ ಕೋರ್ಟ್ ಸೂಚನೆಯಂತೆ ಆಗಸ್ಟ್ 31ರೊಳಗೆ ವಿಚಾರಣೆ ಪೂರ್ಣಗೊಳಿಸಿ,ತೀರ್ಪು ನೀಡಲು ನ್ಯಾಯಾಲಯವು ಪ್ರತಿ ದಿನವೂ ವಿಚಾರಣೆ ನಡೆಸುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.