ನವದೆಹಲಿ: ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಮತದಾರರಿಗೆ ಹಣ ಹಂಚುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.ಅರುಣಾಚಲ ಪ್ರದೇಶದ ಪಸೀಘಾಟ್ನಲ್ಲಿ ನರೇಂದ್ರ ಮೋದಿ ಚುನಾವಣಾ ರ್ಯಾಲಿ ನಡೆಸುತ್ತಿದ್ದಾರೆ. ಬುಧವಾರಸುದ್ದಿಗೋಷ್ಠಿ ನಡೆಸಿದಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ, ಮೋದಿ ರ್ಯಾಲಿ ಮುನ್ನ ಅರುಣಾಚಲ ಪ್ರದೇಶದಲ್ಲಿ ಮತದಾರರಿಗೆ ಹಣ ಹಂಚಲಾಗಿದೆಎಂದು ಆರೋಪಿಸಿದ್ದಾರೆ.
ಮಾಧ್ಯಮದವರ ಮುಂದೆ ಎರಡು ವಿಡಿಯೊಗಳನ್ನು ತೋರಿಸಿದ ಸುರ್ಜೇವಾಲಾ, ಮಂಗಳವಾರ ರಾತ್ರಿ 10.30ಕ್ಕೆ ಅರುಣಾಚಲ ಮುಖ್ಯಮಂತ್ರಿ ಪೇಮಖಂಡು ಅವರ ಬೆಂಗಾವಲು ವಾಹನದ ಮೇಲೆ ಪೊಲೀಸರು ದಾಳಿ ನಡೆಸಿದಾಗ ₹1.8 ಕೋಟಿಪತ್ತೆಯಾಗಿದೆ.ಆದರೆ ಈ ವಿಡಿಯೊ ಅಧಿಕೃತ ವಿಡಿಯೊ ಎಂದು ದೃಢಪಟ್ಟಿಲ್ಲ.
ಖಂಡು ಅವರ ಬೆಂಗಾವಲು ಕಾರಿನಿಂದ ಹಣ ವಶ ಪಡಿಸುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ಎರಡು ಕಾರುಗಳ ವಾಹನ ಸಂಖ್ಯಾ ನೋಂದಣಿ ಫಲಕವೂ ವಿಡಿಯೊ ದೃಶ್ಯದಲ್ಲಿದೆ.
ಈ ವಿಡಿಯೊವನ್ನು ಪ್ಲೇ ಮಾಡಿದ ಸುರ್ಜೇವಾಲ, ಈ ವಿಡಿಯೊ ವೋಟಿಗಾಗಿ ನೋಟು ನೀಡುವ ಹಗರಣವನ್ನು ಬಹಿರಂಗ ಪಡಿಸಿದೆ. ಅರುಣಚಾಲ ಪ್ರದೇಶದ ಮುಖ್ಯಮಂತ್ರಿ ಪೇಮ ಖಂಡು ಅವರ ಬೆಂಗಾವಲು ಪಡೆಯ ಮೇಲೆ ಪೊಲೀಸರು ದಾಳಿ ನಡೆಸಿ ₹1.8 ಕೋಟಿ ಮೌಲ್ಯವಿರುವ ₹500 ಮುಖಬೆಲೆಯ ನೋಟಿನ ಕಂತೆಯನ್ನು ವಶಪಡಿಸಿದ್ದಾರೆ ಎಂದಿದ್ದಾರೆ.
ಇದು ಪ್ರಜಾಪ್ರಭುತ್ವದಲ್ಲಿ ಕಪ್ಪು ದಿನ ಎಂದು ಹೇಳಿದ ಸುರ್ಜೇವಾಲಾ ಅರುಣಾಚಲ ಪ್ರದೇಶದ ಪಸೀಘಾಟ್ನಲ್ಲಿರುನ ಸಿಯಾಂಗ್ ಅತಿಥಿ ಗೃಹದಲ್ಲಿ ನಿಲ್ಲಿಸಿದ್ದವಾಹನದಿಂದ ಈ ಹಣ ವಶಪಡಿಸಿಕೊಳ್ಳಲಾಗಿದೆ.ಯೂತ್ ಕಾಂಗ್ರೆಸ್ ಸದಸ್ಯರು ನೀಡಿದ ದೂರಿನನ್ವಯ ಐದು ವಾಹನಗಳ ಮೇಲೆ ಪೊಲೀಸರು ದಾಳಿ ಮಾಡಿದ್ದರು.
ದಾಳಿಯಲ್ಲಿ ವಶ ಪಡಿಸಿದ ಹಣನನ್ನು ಚುನಾವಣಾ ಆಯೋಗದ ವೆಚ್ಚ ಅಧಿಕಾರಿ ಸ್ಮಿೃತಾಕೌರ್ ಗಿಲ್ ಮತ್ತು ಜಿಲ್ಲಾಧಿಕಾರಿ ಕಿನ್ನಿ ಸಿಂಗ್ ಸೇರಿದಂತೆ ಹಲವಾರು ಪೊಲೀಸ್ ಅಧಿಕಾರಿಗಳು ಎಣಿಸಿದ್ದಾರೆ.
ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಕಪ್ಪು ಹಣವನ್ನು ವಾಪಸ್ ತರುತ್ತೇನೆ ಎಂದು ಮೋದಿ ಹೇಳಿದ್ದರು. ಈಗ ವಶ ಪಡಿಸಿಕೊಂಡಿರುವ ₹1.8 ಕೋಟಿ ಹಣ ಅದರ ಭಾಗವೇ? ಇದು ಪ್ರಧಾನಿಯವರ ರ್ಯಾಲಿಗಾಗಿ ಮತದಾರರರಿಗೆ ಲಂಚ ನೀಡಿದ್ದು ಆದರೆ ಚೌಕೀದಾರ್ ಕಳ್ಳ ಎಂದು ಸಾಬೀತಾಗುತ್ತದೆ ಅಲ್ಲವೇ? ಎಂದು ಸುರ್ಜೇವಾಲಾ ಪ್ರಶ್ನಿಸಿದ್ದಾರೆ.
ಪೀಪಲ್ಸ್ ರೆಪ್ರಸೆಂಟೇಷನ್ ಕಾಯ್ದೆ 1951ರ ಪ್ರಕಾರ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥಿ ತಾಪಿರ್ ಗಾವ್ ವಿರುದ್ಧ ಪ್ರಕರಣ ದಾಖಲಿಸಬೇಕಿದೆ.
ಅದೇ ವೇಳೆ ಪೇಮ ಖಂಡು ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಬೇಕು. ಪಶ್ಚಿಮ ಅರುಣಾಚಲ ಪ್ರದೇಶದಿಂದ ಚುನಾವಣೆ ಸ್ಪರ್ಧಿಸುತ್ತಿರುವ ತಾಪಿರ್ ಗಾವ್ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಸುರ್ಜೇವಾಲಾ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.