ನವದೆಹಲಿ:‘ಸಿಂಗಪುರದಲ್ಲಿ ಕಂಡು ಬಂದಿರುವ ಕೊರೊನಾ ವೈರಸ್ ತಳಿ ಅತ್ಯಂತ ಅಪಾಯಕಾರಿ ಎಂಬುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ಕೂಡಲೇ ಅವರು ಕ್ಷಮೆ ಕೇಳಬೇಕು’ ಎಂದು ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಸಿಂಗಪುರ ಜನರು ಆಗ್ರಹಿಸಿದ್ದಾರೆ.
‘ಸಿಂಗಪುರದಲ್ಲಿ ಕಂಡು ಬಂದಿರುವ ವೈರಸ್ನ ತಳಿ ಮೂರನೇ ಅಲೆ ರೂಪದಲ್ಲಿ ದೆಹಲಿಯನ್ನು ತಲುಪಬಹುದು. ಕೂಡಲೇ ಸಿಂಗಪುರ ಮತ್ತು ಭಾರತ ನಡುವೆ ವಿಮಾನ ಸಂಚಾರ ರದ್ದುಪಡಿಸುವಂತೆ’ ಕೇಜ್ರಿವಾಲ್ ಮಂಗಳವಾರ ಟ್ವೀಟ್ ಮಾಡಿದ್ದರು.
ಸಿಂಗಪುರದ ಪ್ರಮುಖ ಬ್ಲಾಗರ್ ಆಗಿರುವ ಬ್ರೌನ್ ಎಂಬುವವರು, ‘ದೆಹಲಿ ಮುಖ್ಯಮಂತ್ರಿಯವರೇ,ವೈರಸ್ನ ಬಿ.1.617 ತಳಿ ನಿಮ್ಮ ದೇಶದಿಂದಲೇ ಬಂದಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಸಿಂಗಪುರ ವಿದೇಶಾಂಗ ಸಚಿವ ವಿವಿಯನ್ ಬಾಲಕೃಷ್ಣನ್ ಅವರು ಸಹ ಟ್ವೀಟ್ ಮಾಡಿದ್ದು, ‘ಸಿಂಗಪುರ ತಳಿ ಎಂಬುದೇ ಇಲ್ಲ. ರಾಜಕಾರಣಿಗಳು ವಾಸ್ತವಾಂಶ ಅರಿಯಬೇಕು’ ಎಂದಿದ್ದಾರೆ. ಅಲ್ಲದೇ, ಕೇಜ್ರಿವಾಲ್ ಹೇಳಿಕೆಯಿಂದ ಉಂಟಾದ ಗೊಂದಲವನ್ನು ನಿವಾರಿಸಿದ್ದಕ್ಕಾಗಿ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಧನ್ಯವಾದ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.