ನವದೆಹಲಿ (ಪಿಟಿಐ):ಪ್ರಸಿದ್ಧ ರಾಜಕೀಯ ನಿರೂಪಕರಾದ ಪ್ರತಾಪ್ ಭಾನು ಮೆಹ್ತಾ ಅವರು ವಿ.ವಿ ಯ ಪ್ರಾಧ್ಯಾಪಕ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸೋನಿಪತ್ನ ಅಶೋಕ ವಿಶ್ವವಿದ್ಯಾಲಯದ ಬೋಧಕ ವೃಂದ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಮಂಡಳಿ ಸದಸ್ಯರಿಗೆ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೆಹ್ತಾ ಅವರು ಎರಡು ವರ್ಷಗಳ ಹಿಂದೆ ಕುಲಪತಿ ಸ್ಥಾನದಿಂದ ಕೆಳಗಿಳಿದಿದ್ದರು. ವಾರದ ಮುಂಚೆ ತಮ್ಮ ಪ್ರಾಧ್ಯಾಪಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬೆನ್ನಲ್ಲೇ ಖ್ಯಾತ ಅರ್ಥಶಾಸ್ತ್ರಜ್ಞ ಅರವಿಂದ್ ಸುಬ್ರಹ್ಮಣಿಯಂ ಸಹ ವಿ.ವಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ
ಮೆಹ್ತಾ ಅವರಿಗೆ ಬೆಂಬಲ ಸೂಚಿಸಿ, ವಿ.ವಿಯ ಹಳೆ ವಿದ್ಯಾರ್ಥಿಗಳ ಸಂಘವು ಪ್ರತ್ಯೇಕ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ’ಮೆಹ್ತಾ ಅವರ ನಿರ್ಗಮನವು ಅಧ್ಯಾಪಕರ ಕರಾಳ ಭವಿಷ್ಯವನ್ನು ಸೂಚಿಸುತ್ತದೆ. ಇದು ಬಹಳ ದುಃಖದ ಸಂಗತಿ‘ ಎಂದು ಹೇಳಿದೆ.
ಮೆಹ್ತಾ ಅವರ ಬರಹ, ಸರ್ಕಾರದ ವಿರುದ್ಧ ಟೀಕೆಗಳಿಂದಲೇ ಅವರು ರಾಜೀನಾಮೆ ನೀಡಿದ್ದಾರೆ. ಈ ಪರಿಸ್ಥಿತಿ ತುಂಬಾ ಕಷ್ಟಕರವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಹಾಗೆಯೇ ರಾಜೀನಾಮೆಯನ್ನು ರದ್ದುಗೊಳಿಸುವಂತೆಯೂ ಕೋರಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.