ಗುವಾಹಟಿ: ಹೊಸ ಆಧಾರ್ ಕಾರ್ಡ್ ಪಡೆದುಕೊಳ್ಳಲು ಅಕ್ಟೋಬರ್ 1ರಿಂದ ನಿರ್ಬಂಧ ಹೇರಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬಂಗಾಳಿ ಮಾತನಾಡುವ ಮುಸ್ಲಿಮರನ್ನು ಅಸ್ಸಾಂನಿಂದ ಹೊರಗಟ್ಟುವ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಕಾರ್ಯಯೋಜನೆಯ ಭಾಗವಾಗಿ ಸಚಿವ ಸಂಪುಟವು ಗುರುವಾರ ಈ ನಿರ್ಧಾರ ಕೈಗೊಂಡಿದೆ.
ನೆರೆಯ ಬಾಂಗ್ಲಾದೇಶದ ‘ಅಕ್ರಮ ವಲಸಿಗರು’ ಅಸ್ಸಾಂನಲ್ಲಿ ಆಧಾರ್ ಕಾರ್ಡ್ ಪಡೆದುಕೊಂಡು ಭಾರತದ ಪೌರತ್ವ ಪಡೆದುಕೊಳ್ಳುತ್ತಾರೆ ಎಂದು ಸರ್ಕಾರ ಹೇಳಿದೆ. ಈ ಬಗ್ಗೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪ್ರತಿಕ್ರಿಯಿಸಿದ್ದಾರೆ.
‘ಬಾಂಗ್ಲಾದೇಶದ ಅಕ್ರಮ ವಲಸಿಗರು ಭಾರತ ಪ್ರವೇಶಿಸುವುದನ್ನು ಪ್ರತಿ ನಿತ್ಯವೂ ತಡೆಯುತ್ತಿದ್ದೇವೆ. ನಿನ್ನೆಯಷ್ಟೇ ಏಳು ಬಾಂಗ್ಲಾದೇಶಿಗರನ್ನು ತಡೆದಿದ್ದೇವೆ. ಆದರೂ ಕೆಲವರು ಭಾರತ ಪ್ರವೇಶಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಯತ್ನಿಸುತ್ತಾರೆ. ಬಳಿಕ ಇದನ್ನೇ ಬಳಸಿಕೊಂಡು ಭಾರತದ ಪೌರತ್ವ ಪಡೆದುಕೊಳ್ಳುತ್ತಾರೆ. ಅವರ ಈ ಯೋಜನೆಯನ್ನು ನಾವು ಹಾಳು ಮಾಡಬೇಕು’ ಎಂದು ಮುಖ್ಯಮಂತ್ರಿ ಹೇಳಿದರು.
‘ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಮತ್ತು ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಿಕೊಡುವ ಕಾರ್ಯವು ಮುಂದುವರಿಯಲಿದೆ’ ಎಂದರು.
‘ಮುಂಬರುವ ಅಸ್ಸಾಂ ಚುನಾವಣೆಯ ಸಲುವಾಗಿ ಮುಖ್ಯಮಂತ್ರಿ ಶರ್ಮಾ ಅವರು ಈ ರೀತಿ ಮಾಡುತ್ತಿದ್ದಾರೆ. ಪದೇ ಪದೇ ಬಂಗಾಲಿ ಭಾಷೆ ಮಾತನಾಡುವ ಮುಸ್ಲಿಮರನ್ನು ಗುರಿಯಾಗಿಸಿ ಮತವಿಭಜನೆಗೆ ಯತ್ನಿಸುತ್ತಿದ್ದಾರೆ’ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.