ADVERTISEMENT

ಅಸ್ಸಾಂ: ಬಂದ್‌ನಿಂದ ಜನಜೀವನ ಅಸ್ತವ್ಯಸ್ತ

ಮಿಜೋರಾಂ ಜತೆ ಗಡಿ ಸಂಘರ್ಷ: ಶಾಶ್ವತ ಪರಿಹಾರಕ್ಕೆ ಆಗ್ರಹ

ಪಿಟಿಐ
Published 28 ಜುಲೈ 2021, 9:29 IST
Last Updated 28 ಜುಲೈ 2021, 9:29 IST
ಅಸ್ಸಾಂ–ಮಿಜೋರಾಂ ಗಡಿ ಸಂಘರ್ಷದಲ್ಲಿ ಸಾವಿಗೀಡಾದ ಆರು ಪೊಲೀಸ್‌ ಸಿಬ್ಬಂದಿಗೆ ಗುವಾಹಟಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಮೇಣದ ಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಿದರು  ಪಿಟಿಐ ಚಿತ್ರ
ಅಸ್ಸಾಂ–ಮಿಜೋರಾಂ ಗಡಿ ಸಂಘರ್ಷದಲ್ಲಿ ಸಾವಿಗೀಡಾದ ಆರು ಪೊಲೀಸ್‌ ಸಿಬ್ಬಂದಿಗೆ ಗುವಾಹಟಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಮೇಣದ ಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಿದರು  ಪಿಟಿಐ ಚಿತ್ರ   

ಗುವಾಹಟಿ: ಅಸ್ಸಾಂನ ಬರಾಕ್‌ ಪ್ರದೇಶದ ಮೂರು ಜಿಲ್ಲೆಗಳಲ್ಲಿ ಕರೆ ನೀಡಲಾಗಿದ್ದ ಬಂದ್‌ನಿಂದ ಸಾಮಾನ್ಯ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಅಂತರ ರಾಜ್ಯ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಮಿಜೋರಾಂ ಜತೆ ನಡೆದ ಸಂಘರ್ಷದ ಸಂದರ್ಭದಲ್ಲಿ ಆರು ಪೊಲೀಸರು ಸೇರಿದಂತೆ ಏಳು ಮಂದಿ ಸಾವಿಗೀಡಾಗಿರುವುದನ್ನು ಪ್ರತಿಭಟಿಸಿ 12 ಗಂಟೆಗಳ ಬಂದ್‌ಗೆ ಕರೆ ನೀಡಲಾಗಿದೆ.

ಬರಾಕ್‌ ಡೆಮಾಕ್ರಟಿಕ್‌ ಫ್ರಂಟ್‌ ಈ ಬಂದ್‌ಗೆ ಕರೆ ನೀಡಿದ್ದು, ವಿರೋಧ ಪಕ್ಷ ಎಐಯುಡಿಎಫ್‌ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ADVERTISEMENT

ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಿಜೋರಾಂ ಗಡಿ ಪ್ರದೇಶದಲ್ಲಿರುವ ಕಚಾರ್‌, ಹೈಲಾಕಾಂಡಿ ಮತ್ತು ಕರಿಮಗಂಜ್‌ ಜಿಲ್ಲೆಗಳಲ್ಲಿ ಸಾರಿಗೆ ಸಂಚಾರ ಬಹುತೇಕ ಸ್ಥಗಿತಗೊಂಡಿದೆ. ರೈಲು ಸಂಚಾರದ ಮೇಲೆ ಬಂದ್‌ ಯಾವುದೇ ರೀತಿ ಪರಿಣಾಮ ಬೀರಿಲ್ಲ. ಎಲ್ಲೆಡೆ ಅಂಗಡಿಗಳನ್ನು ಸಹ ಮುಚ್ಚಲಾಗಿದೆ.

ಹೈಲಾಕಾಂಡಿಯಲ್ಲಿ ಮಿಜೋರಾಂಗೆ ತೆರಳುವ ರಸ್ತೆ ಮಾರ್ಗಗಳನ್ನು ಕೆಲವು ಸಂಘಟನೆಗಳು ಬಂದ್‌ ಮಾಡಿವೆ. ಅನಿರ್ದಿಷ್ಟ ಅವಧಿಗೆ ಆರ್ಥಿಕ ನಿರ್ಬಂಧ ಹೇರುವ ನಿಟ್ಟಿನಲ್ಲಿ ಮಿಜೋರಾಂಗೆ ತೆರಳುವ ಲಾರಿಗಳನ್ನು ತಡೆಯಲಾಗುತ್ತಿದೆ.

‘ಬಂದ್‌ಗೆ ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ. ನಮ್ಮ ಪೊಲೀಸ್‌ ಸಿಬ್ಬಂದಿ ಸಾವಿಗೀಡಾಗಿದ್ದರಿಂದ ಅನಿವಾರ್ಯವಾಗಿ ಬಂದ್‌ಗೆ ಕರೆ ನೀಡಲಾಗಿದೆ. ಈ ವಿವಾದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವುದು ಅಗತ್ಯವಿದೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿ ರಕ್ತಪಾತ ನಡೆಯುವುದು ನಮಗೆ ಬೇಕಾಗಿಲ್ಲ’ ಎಂದು ಬಿಡಿಎಫ್‌ ಮುಖ್ಯ ಸಂಚಾಲಕ ಪ್ರದೀಪ್‌ ದತ್ತ ರಾಯ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.