ADVERTISEMENT

ಕೊರೊನಾ ಲಸಿಕೆ ಬಗ್ಗೆ ಅರಿವು: ಹೀಗೊಬ್ಬ ವ್ಯಾಕ್ಸಿನ್ ಮ್ಯಾನ್...

ದೀಪಾಂಕರ್ ಮಾಡುತ್ತಿರುವುದು ಅಳಿಲು ಸೇವೆಯಾದರೂ ಮಹತ್ವದ ಕಾರ್ಯವಾಗಿದೆ

ಪಿಟಿಐ
Published 15 ಜೂನ್ 2021, 13:18 IST
Last Updated 15 ಜೂನ್ 2021, 13:18 IST
ದೀಪಾಂಕರ್ ಮಜುಮ್‌ದಾರ್ (ಹಸಿರಂಗಿ), ಚಿತ್ರ–ಟ್ವಿಟರ್
ದೀಪಾಂಕರ್ ಮಜುಮ್‌ದಾರ್ (ಹಸಿರಂಗಿ), ಚಿತ್ರ–ಟ್ವಿಟರ್   

ಡುಬ್ರಿ: ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ವ್ಯಾಪಕವಾಗಿ ಲಸಿಕೆ ಹಾಕುವ ಕಾರ್ಯಕ್ರಮ ಚಾಲ್ತಿಯಲ್ಲಿದೆ. ಆದರೆ, ಲಸಿಕೆ ಬಗ್ಗೆ ಅನೇಕ ಜನರಲ್ಲಿ ಗೊಂದಲ, ಮೂಢನಂಬಿಕೆ ಇದೆ. ಕೆಲವರು ಲಸಿಕೆ ಕುರಿತು ಅಪಪ್ರಚಾರ ಕೂಡ ನಡೆಸಿದ್ದಾರೆ.

ಈ ನಿಟ್ಟಿನಲ್ಲಿ ಸರ್ಕಾರಗಳು ಅಪಪ್ರಚಾರ ತೊಡೆದು ಹಾಕಲು ಸಾಕಷ್ಟು ಶ್ರಮವಹಿಸುತ್ತಿದ್ದರೂ ಗಾಳಿಸುದ್ದಿಗಳಿಗೆ ಭರವಿಲ್ಲ.

ಆದರೆ, ಅಸ್ಸಾಂನಲ್ಲಿ ಯುವಕನೊಬ್ಬ ಮನೆ ಮನೆಗೆ ತೆರಳಿ ಕೋವಿಡ್–19 ಲಸಿಕೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಡೆಬ್ರಿ ಜಿಲ್ಲೆಯ ದೀಪಾಂಕರ್ ಮಜುಮ್‌ದಾರ್ ಎನ್ನುವ 35 ವರ್ಷದ ಯುವಕ ಈ ಕೆಲಸ ಮಾಡುತ್ತಿದ್ದಾರೆ. ಇವರನ್ನು ಆ ಭಾಗದಲ್ಲಿ ‘ವ್ಯಾಕ್ಸಿನ್ ಮ್ಯಾನ್‘ ಎಂದು ಅಧಿಕಾರಿಗಳು, ಜನ ಕರೆಯುತ್ತಿದ್ದಾರೆ.

ADVERTISEMENT

ಜಿಲ್ಲೆಯ ಎಲ್ಲ ಹಳ್ಳಿಗಳಿಗೂ ಭೇಟಿ ನೀಡುವ ಗುರಿ ಇಟ್ಟುಕೊಂಡಿರುವ ದೀಪಾಂಕರ್ ವಿಶೇಷವಾಗಿ ಅಶಿಕ್ಷಿತರಿಗೆ, ಕಾಡಂಚಿನಲ್ಲಿ ವಾಸವಾಗಿರುವವರಿಗೆ, ಸಂಪರ್ಕ ಸೌಲಭ್ಯಗಳಿಂದ ದೂರ ಉಳಿದಿರುವವರಿಗೆ, ವಯಸ್ಸಾದವರು ಹಾಗೂ ಲಸಿಕೆ ಬಗ್ಗೆ ಭಯ ಹೊಂದಿರುವವರ ಬಳಿ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ಇದಕ್ಕಾಗಿ ಅವರು ಹಲವಾರು ಮಾರ್ಗಗಳನ್ನು ಕಂಡುಕೊಂಡಿದ್ಧಾರೆ.

‘ಅನೇಕರು ಮಾಹಿತಿ ಕೊರತೆ ಹಾಗೂ ಅಪಪ್ರಚಾರದಿಂದ ಮಹತ್ವವಾದ ಕೋವಿಡ್–19 ಲಸಿಕೆ ತೆಗೆದುಕೊಂಡಿಲ್ಲ. ಇದು ಮುಂದೆ ಅನಾಹುತಕ್ಕೆ ಕಾರಣವಾಗಬಾರದು ಎಂದು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದೇನೆ. ಇದಕ್ಕಾಗಿ ಮೊಬೈಲ್‌ನಲ್ಲಿ ಪತ್ರಿಕೆ, ಟಿವಿಗಳಲ್ಲಿ ಬಂದಿರುವುದನ್ನು ಜನಕ್ಕೆ ತಿಳಿಸುತ್ತೇನೆ. ಸರ್ಕಾರದ ಕರಪತ್ರಗಳನ್ನು ತೋರಿಸುತ್ತೇನೆ. ಅಧಿಕಾರಿಗಳು ನೀಡಿರುವ ವಿಡಿಯೋಗಳನ್ನು ತೋರಿಸಿ ಅರಿವು ಮೂಡಿಸುತ್ತೇನೆ. ಲಸಿಕೆ ಎಲ್ಲೆಲ್ಲಿ ಸಿಗುತ್ತದೆ, ಹೇಗೆ ಪಡೆಯಬೇಕು ಎಂಬ ಮಾಹಿತಿ ನೀಡುತ್ತೇನೆ‘ ಎಂದು ದೀಪಾಂಕರ್ ಹೇಳಿದ್ದಾರೆ.

ಒಟ್ಟಿನಲ್ಲಿ ಕೊರೊನಾ ಸೋಂಕು ಹೊಡೆದೋಡಿಸುವ ನಿಟ್ಟಿನಲ್ಲಿ ದೀಪಾಂಕರ್ ಮಾಡುತ್ತಿರುವುದು ಅಳಿಲು ಸೇವೆಯಾದರೂ ಮಹತ್ವದ ಕಾರ್ಯವಾಗಿದೆ ಎಂದು ಡುಬ್ರಿ ಜಿಲ್ಲೆಯ ಆರೋಗ್ಯಾಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.