ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂಗಳಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ ಕಾವೇರತಡೊಗಿದೆ. ಬುಧವಾರದ ಚುನಾವಣಾ ಪ್ರಚಾರದ ವಿದ್ಯಮಾನಗಳ ಮುಖ್ಯಾಂಶಗಳು ಇಲ್ಲಿವೆ...
l ಭದ್ರತೆ ಹೆಚ್ಚಳ: ಬಿಜೆಪಿ ಮುಖಂಡ ಮುಕುಲ್ ರಾಯ್ ಅವರಿಗೆ ಪಶ್ಚಿಮ ಬಂಗಾಳದಲ್ಲಿ ಭದ್ರತೆಯನ್ನು ‘ವೈ+’ ವರ್ಗದಿಂದ ‘ಝಡ್’ ವರ್ಗಕ್ಕೆ ಹೆಚ್ಚಿಸಲಾಗಿದೆ. ಅವರು ಹೊರಗೆ ಓಡಾಡುವ ಸಂದರ್ಭದಲ್ಲಿ 24–30 ಸಶಸ್ತ್ರ ಸಿಬ್ಬಂದಿ ಭದ್ರತೆ ಒದಗಿಸಲಿದ್ದಾರೆ. ಅವರ ನಿವಾಸಕ್ಕೆ ಅದೇ ರೀತಿಯ ಭದ್ರತೆ ದೊರೆಯಲಿದೆ.
l ಪ್ರಣಾಳಿಕೆ ಬಿಡುಗಡೆ: ಅಸ್ಸಾಂ ಗಣ ಪರಿಷತ್ (ಎಜಿಪಿ) ವಿಧಾನಸಭಾ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಅಸ್ಸಾಂ ಒಪ್ಪಂದ ಜಾರಿಯ ಭರವಸೆ ಕೊಡಲಾಗಿದೆ. ಆದರೆ, ಮಿತ್ರ ಪಕ್ಷ ಬಿಜೆಪಿಯ ಪ್ರಣಾಳಿಕೆಯ ರೀತಿಯಲ್ಲಿಯೇ ಎಜಿಪಿ ಪ್ರಣಾಳಿಕೆಯಲ್ಲೂ ಸಿಎಎ ಬಗ್ಗೆ ಪ್ರಸ್ತಾಪವೇ ಇಲ್ಲ.
l ಅಖಿಲ್ ಪರ ತಾಯಿ ಪ್ರಚಾರ: ಸಿಎಎ ವಿರೋಧಿ ಹೋರಾಟಗಾರ ಅಖಿಲ್ ಗೊಗೊಯಿ ಅವರ ತಾಯಿ ಪ್ರಿಯದಾ ಗೊಗೊಯಿ (84) ಅವರು ಮಗನ ಪರವಾಗಿ ಮನೆಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಸಿಎಎ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ಬಂಧನಕ್ಕೆ ಒಳಗಾಗಿರುವ ಅಖಿಲ್ ಅವರು ಸೆರೆಮನೆಯಿಂದಲೇ ಅಸ್ಸಾಂ ವಿಧಾನಸಭೆಯ ಶಿವಸಾಗರ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಸಾಮಾಜಿಕ ಕಾರ್ಯಕರ್ತರಾದ ಮೇಧಾ ಪಾಟ್ಕರ್ ಮತ್ತು ಸಂದೀಪ್ ಪಾಂಡೆ, ಪ್ರಿಯದಾ ಜತೆಗೂಡಿದ್ದಾರೆ.
l ಸೌರವ್ ಬಿಜೆಪಿ ಸೇರಲಿ: ಆಡಳಿತಾರೂಢ ಟಿಎಂಸಿಯನ್ನು ‘ಕ್ಲೀನ್ ಬೌಲ್’ ಮಾಡಬೇಕಿದ್ದರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಬಿಜೆಪಿ ಸೇರಬೇಕು ಎಂದು ಮಾಜಿ ಕ್ರಿಕೆಟಿಗ ಹಾಗೂ ಮೊಯ್ನಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶೋಕ್ ದಿಂಡಾ ಹೇಳಿದ್ದಾರೆ. 2019ರಲ್ಲಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ಸೌರವ್ ಅವರು ಬಿಜೆಪಿ ಜತೆಗೆ ನಂಟು ಹೊಂದಿದ್ದಾರೆ ಎನ್ನಲಾಗಿದೆ. ಆದರೆ, ಪಶ್ಚಿಮ ಬಂಗಾಳದ ಅತ್ಯಂತ ಜನಪ್ರಿಯ ಕ್ರೀಡಾ ತಾರೆ ಸೌರವ್ ಅವರು ಯಾವುದೇ ಪಕ್ಷ ಸೇರುವುದಾಗಿ ಮಾತು ಕೊಟ್ಟಿಲ್ಲ.
l ಮುಖ್ಯಮಂತ್ರಿ ಆಗಬೇಕೆಂದಿಲ್ಲ: ರಾಜ್ಯದ ಮುಖ್ಯಮಂತ್ರಿ ಹುದ್ದೆಯ ಬೆನ್ನು ಬಿದ್ದಿಲ್ಲ ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಗೌರವ್ ಗೊಗೊಯಿ ಹೇಳಿದ್ದಾರೆ. ಮೂರು ಬಾರಿ ಅಸ್ಸಾಂನ ಮುಖ್ಯಮಂತ್ರಿಯಾಗಿದ್ದ ತರುಣ್ ಗೊಗೊಯಿ ಅವರ ಮಗ ಗೌರವ್. ತಮ್ಮ ತಂದೆ ಪ್ರತಿನಿಧಿಸುತ್ತಿದ್ದ ತಿತಾಬೊರ್ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ, ಇದು ತಂದೆಯ ಕೊನೆಯಾಸೆಯಾಗಿತ್ತು ಎಂದು ಗೌರವ್ ಹೇಳಿದ್ದಾರೆ.ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಅಧಿಕಾಕ್ಕೆ ಬಂದರೆ ಗೌರವ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.