ADVERTISEMENT

Election Results 2022: ವಂಶಪರಂಪರೆಯ ರಾಜಕೀಯದ ಸೂರ್ಯಾಸ್ತ: ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಮಾರ್ಚ್ 2022, 16:03 IST
Last Updated 10 ಮಾರ್ಚ್ 2022, 16:03 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವೆದಹಲಿ: ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವುದಕ್ಕೆ ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸಿರುವ ಪ್ರಧಾನಿ ಮೋದಿ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ದೆಹಲಿಯ ಪಕ್ಷದ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾಡಿರುವ ಭಾಷಣದ ಮುಖ್ಯಾಂಶಗಳು ಇಲ್ಲಿವೆ.


ವಂಶಪರಂಪರೆಯ ರಾಜಕೀಯದ ಸೂರ್ಯಾಸ್ತ...
ದೇಶದಲ್ಲಿ ವಂಶಪರಂಪರೆಯ ರಾಜಕೀಯದ ಸೂರ್ಯಾಸ್ತದ ದಿನ ಬಂದೇ ಬರುತ್ತದೆ. ಈ ಫಲಿತಾಂಶಗಳಲ್ಲೂ ಜನರು ಇದನ್ನೇ ಸೂಚಿಸಿದ್ದಾರೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

2024ರ ಚುನಾವಣೆಯ ಭವಿಷ್ಯ ನಿರ್ಧಾರ
ಬಿಜೆಪಿಗೆ ಎಲ್ಲ ವಿಭಾಗದ ಜನರಿಂದ ಬೆಂಬಲ ದೊರಕಿದೆ. ಉತ್ತರ ಪ್ರದೇಶದ ಚುನಾವಣೆ ಫಲಿತಾಂಶವು 2024ರ ಲೋಕಸಭಾ ಚುನಾವಣೆಯ ಭವಿಷ್ಯವನ್ನು ನಿರ್ಧರಿಸಿದೆ ಎಂದು ಹೇಳಿದ್ದಾರೆ.

'ಆಪರೇಷನ್ ಗಂಗಾ' ದುರುಪಯೋಗಪಡಿಸಲು ಯತ್ನ...
ಸಾವಿರಾರು ಭಾರತೀಯ ವಿದ್ಯಾರ್ಥಿಗಳು, ನಾಗರಿಕರು ಉಕ್ರೇನ್‌ನಲ್ಲಿ ಸಿಲುಕಿದ್ದಾರೆ. ಆದರೆ ದೇಶದ ನೈತಿಕ ಸ್ಥೈರ್ಯವನ್ನು ಮುರಿಯುವ ಪ್ರಯತ್ನ ನಡೆಯುತ್ತಿರುವುದು ದುರದೃಷ್ಟಕರ. ಈ ಜನರು ಸಹ 'ಆಪರೇಷನ್ ಗಂಗಾ' ದುರುಪಯೋಗಪಡಿಸಲು ಪ್ರಯತ್ನಿಸಿದರು. ಇದು ಭಾರತದ ಭವಿಷ್ಯಕ್ಕೂ ಎದುರಾಗುತ್ತಿರುವ ದೊಡ್ಡ ಆತಂಕ ಎಂದು ಹೇಳಿದ್ದಾರೆ.

ರಾಜಕೀಯ ಮಟ್ಟ ಕುಗ್ಗಿಸುವ ಪ್ರಯತ್ನ
ನಾನು ಕೆಲವು ಆತಂಕಗಳನ್ನುಹಂಚಿಕೊಳ್ಳಲು ಬಯಸುತ್ತೇನೆ. ಸಾಮಾನ್ಯ ಜನರು ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಕೆಲವರು ರಾಜಕೀಯದ ಗುಣಮಟ್ಟವನ್ನು ಕುಂಠಿತಗೊಳಿಸುತ್ತಿದ್ದಾರೆ. ನಮ್ಮ ಲಸಿಕಾ ಕಾರ್ಯಕ್ರಮವನ್ನು ಇಡೀ ಜಗತ್ತೇ ಶ್ಲಾಘಿಸಿದರೆ ಕೆಲವರು ಪ್ರಶ್ನಿಸುತ್ತಿದ್ದರು ಎಂದು ವಿರೋಧ ಪಕ್ಷಗಳ ವಿರುದ್ಧ ಟೀಕೆ ಮಾಡಿದ್ದಾರೆ.

ಜನರಿಗೆ ನೀಡಿದ ಭರವಸೆ ಈಡೇರಿಕೆ
ಉತ್ತರ ಪ್ರದೇಶವು ದೇಶಕ್ಕೆ ಅನೇಕ ಪ್ರಧಾನ ಮಂತ್ರಿಗಳನ್ನು ನೀಡಿದೆ. ಆದರೆ ಮುಖ್ಯಮಂತ್ರಿಯೊಬ್ಬರು ಪುನರಾಯ್ಕೆಯಾಗಿರುವುದು ಇದೇ ಮೊದಲು. ಅಷ್ಟೇ ಅಲ್ಲದೆ ಬಿಜೆಪಿ ಮತ ಗಳಿಕೆಯಲ್ಲೂ ಹೆಚ್ಚಾಗಿದೆ. ನಾವು ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಿದ್ದೇವೆ. ಇದು ಜನರಿಗೆ ನೀಡಿದ ಭರವಸೆಯಾಗಿದೆ ಎಂದು ತಿಳಿಸಿದ್ದಾರೆ.

ಮತದಾರರಿಗೆ ಧನ್ಯವಾದ ಸಲ್ಲಿಸಿದ ಪ್ರಧಾನಿ ಮೋದಿ
ಮಾರ್ಚ್ 10ರಿಂದಲೇ ಹೋಳಿ ಆರಂಭವಾಗಲಿದೆ ಎಂದು ನಾವು ಮೊದಲೇ ಹೇಳಿದ್ದೆವು. ಇದು ನಮ್ಮ ಎನ್‌ಡಿಎ ಬೆಂಬಲಿಗರ 'ವಿಕ್ಟರಿ 4'. ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಭಾಗವಹಿಸಿ ಬಿಜೆಪಿ ಗೆಲುವನ್ನು ಖಚಿತಪಡಿಸಿದ್ದಕ್ಕಾಗಿ ನಾನು ಎಲ್ಲ ಮತದಾರರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ಎರಡನೇ ಸಲ ಸಿಎಂ ಪುನರಾಯ್ಕೆಯಾಗಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಅವರನ್ನು ಅಭಿನಂದಿಸಿದ್ದಾರೆ.

ಬಿಜೆಪಿ ಬಡವರ ಪರವಾಗಿದೆ...
ಚುನಾವಣೆ ಫಲಿತಾಂಶವು ಬಿಜೆಪಿ ಬಡವರ ಪರವಾಗಿದೆ ಎಂಬುದನ್ನು ಮುದ್ರೆ ಒತ್ತಿದೆ. ಬಡವರು ತಮ್ಮ ಹಕ್ಕುಗಳನ್ನು ಪಡೆಯುವವರೆಗೂ ನಾವು ವಿಶ್ರಮಿಸುವುದಿಲ್ಲ. ಪ್ರತಿಯೊಬ್ಬ ಬಡವರು ಮತ್ತು ಅರ್ಹರನ್ನು ನಾವು ತಲುಪಲಿದ್ದೇವೆ ಎಂದು ಹೇಳಿದ್ದಾರೆ.

ಪ್ರತ್ಯೇಕತಾವಾದಿ ರಾಜಕೀಯದಿಂದ ಪಂಜಾಬ್ ರಾಜ್ಯದ ರಕ್ಷಣೆ...
ಪ್ರತ್ಯೇಕತಾವಾದಿ ರಾಜಕೀಯದಿಂದ ಗಡಿ ರಾಜ್ಯವಾದ ಪಂಜಾಬ್ ಅನ್ನು ರಕ್ಷಿಸಲು ಬಿಜೆಪಿ ಕಾರ್ಯಕರ್ತರು ಶ್ರಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.