ನವದೆಹಲಿ: ಉತ್ತರಾಖಂಡ ವಿಧಾನಸಭಾ ಚುನಾವಣೆಗೆ 11 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ್ದು, ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರು ರಾಮ್ನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ರಾಜ್ಯದಲ್ಲಿ ಪಕ್ಷದ ಚುನಾವಣಾ ಪ್ರಚಾರ ಅಭಿಯಾನದ ಮುಖ್ಯಸ್ಥರಾಗಿರುವ ರಾವತ್, 2017ರ ಚುನಾವಣೆಯಲ್ಲಿ ಹರಿದ್ವಾರ ಗ್ರಾಮೀಣ ಮತ್ತು ಕಿಚಚಾ ಕ್ಷೇತ್ರಗಳಿಂದ ಸ್ಪರ್ಧಿಸಿ ಸೋತಿದ್ದರು.
ಅನುಕೃತಿ ಗುಸೈನ್ ರಾವತ್ ಅವರನ್ನು ಲ್ಯಾನ್ಸ್ಡೌನ್ ಕ್ಷೇತ್ರದಿಂದ ಕಾಂಗ್ರೆಸ್ ಕಣಕ್ಕಿಳಿಸಿದೆ. ಇವರು ಹಾರಕ್ ಸಿಂಗ್ ರಾವತ್ ಅವರ ಸೊಸೆ. ಇವರು ಬಿಜೆಪಿ ತೊರೆದು ಶುಕ್ರವಾರ ಕಾಂಗ್ರೆಸ್ ಸೇರಿದ್ದರು. ಹಾರಕ್ ಸಿಂಗ್ ರಾವತ್ ಅವರ ಉಮೇದುವಾರಿಕೆಯನ್ನು ಪಕ್ಷ ಇನ್ನೂ ಬಹಿರಂಗಪಡಿಸಿಲ್ಲ.
ಎರಡನೇ ಪಟ್ಟಿಯ ಮೂಲಕ ಒಟ್ಟು 64 ಅಭ್ಯರ್ಥಿಗಳನ್ನು ಅಖೈರುಗೊಳಿಸಲಾಗಿದೆ.ಇನ್ನೂ ಆರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು ಬಾಕಿಯಿದೆ. 70 ಸದಸ್ಯಬಲದ ಉತ್ತರಾಖಂಡ ವಿಧಾನಸಭೆಗೆ ಫೆ. 14ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.
-----
ಪಕ್ಷವೇ ಪರಮೋಚ್ಚ: ರಿತು ಖಂಡೂರಿ
ಡೆಹ್ರಾಡೂನ್ ವರದಿ: ಯಮಕೇಶ್ವರ ಶಾಸಕಿ ರಿತು ಖಂಡೂರಿ ಅವರಿಗೆ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಲು ಬಿಜೆಪಿ ನಿರಾಕರಿಸಿದೆ. ಪಕ್ಷ ಟಿಕೆಟ್ ನಿರಾಕರಿಸಿರುವುದರ ಹಿಂದೆ ಒಳ್ಳೆಯ ಉದ್ದೇಶ ಇರಬಹುದು ಎಂದು ಪ್ರತಿಕ್ರಿಯಿಸಿರುವ ರಿತು, ಎಲ್ಲಕ್ಕಿಂತ ಪಕ್ಷವೇ ಪರಮೋಚ್ಚ ಎಂದಿದ್ದಾರೆ. ರಿತು ಅವರು ಮಾಜಿ ಮುಖ್ಯಮಂತ್ರಿ ಮೇಜರ್ ಜನರಲ್ ಬಿ.ಸಿ. ಖಂಡೂರಿ ಅವರ ಪುತ್ರಿ.
ರಿತು ಅವರು ಜಾಗದಲ್ಲಿ ರೇಣು ಬಿಷ್ಟ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ. ಚುನಾವಣಾ ಪೂರ್ವ ಆಂತರಿಕ ಸಮೀಕ್ಷೆಯ ಮಾಹಿತಿ ಅಧರಿಸಿ ಪಕ್ಷ ಈ ನಿರ್ಧಾರ ತೆಗೆದುಕೊಂಡಿದೆ. ಹಾಲಿ ಶಾಸಕಿಗೆ ಗೆಲುವಿನ ಸಾಧ್ಯತೆ ಕಡಿಮೆಯಿತ್ತು ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿತ್ತು ಎನ್ನಲಾಗಿದೆ.
ಕಳೆದ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ರೇಣು ಬಿಷ್ಟ್ ಅವರನ್ನು ರಿತು ಅವರು ಸೋಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.