ADVERTISEMENT

ಭಿನ್ನ ಸಿದ್ಧಾಂತಗಳನ್ನು ನಂಬಿದ್ದವರನ್ನು ಒಟ್ಟಿಗೆ ಮುನ್ನಡೆಸಿದ್ದ ವಾಜಪೇಯಿ: ಜೋಶಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಡಿಸೆಂಬರ್ 2021, 11:20 IST
Last Updated 25 ಡಿಸೆಂಬರ್ 2021, 11:20 IST
ಅಟಲ್ ಬಿಹಾರಿ ವಾಜಪೇಯಿ
ಅಟಲ್ ಬಿಹಾರಿ ವಾಜಪೇಯಿ   

ನವದೆಹಲಿ: ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರು ಭಿನ್ನಸಿದ್ಧಾಂತಗಳಲ್ಲಿ ನಂಬಿಕೆ ಇರಿಸಿದ್ದವರನ್ನು ಒಗ್ಗೂಡಿಸಿ, ಅಧಿಕಾರ ನಡೆಸಿದ್ದರು ಎಂದು ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಹೇಳಿದ್ದಾರೆ.

ಇಂದು (ಡಿ.25) ವಾಜಪೇಯಿ ಅವರ ಜನ್ಮದಿನ. ಇದರ ಅಂಗವಾಗಿ ವಾಜಪೇಯಿ ಕುರಿತು ಮಾತನಾಡಿರುವ ಜೋಶಿ, 'ಅಟಲ್‌ ಅವರು 22–23 ಪಕ್ಷಗಳನ್ನು ಒಗ್ಗೂಡಿಸಿ, ಭಾರತವನ್ನು ಪರಮಾಣು ಶಕ್ತಿ ರಾಷ್ಟ್ರವಾಗಿ ರೂಪಿಸಿದ್ದರು. ವಿವಿಧ ಸಿದ್ಧಾಂತಗಳಲ್ಲಿ ನಂಬಿಕೆ ಹೊಂದಿರುವವರನ್ನು ಇಟ್ಟುಕೊಂಡು, ಎಲ್ಲ ಭಿನ್ನತೆಗಳನ್ನು ಕಳಚಿ ಭಾರತದ ರಾಜಕೀಯಕ್ಕೆ ಹೊಸ ದಿಕ್ಕು ತೋರಿಸಿದ್ದರು' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಟಲ್ ಜನ್ಮದಿನವನ್ನು ದೇಶದಲ್ಲಿ 'ಉತ್ತಮ ಆಡಳಿತ ದಿನ'ವಾಗಿ ಆಚರಿಸಲಾಗುತ್ತದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು, ರಾಷ್ಟ್ರ ರಾಜಧಾನಿಯಲ್ಲಿರುವ ಅಟಲ್ ಸಮಾಧಿ ಸ್ಥಳ 'ಸದೈವ ಅಟಲ್'ಗೆ ತೆರಳಿಇಂದು ನಮನ ಸಲ್ಲಿಸಿದರು. ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯಲ್ ಮತ್ತು ಇನ್ನಿತರ ನಾಯಕರೂ ಭಾಗಿಯಾದರು.

ADVERTISEMENT

ಬಳಿಕ ಟ್ವೀಟ್‌ ಮಾಡಿರುವ ಮೋದಿ,'ಅಟಲ್‌ ಜೀ ಜಯಂತಿಯಂದು ಅವರನ್ನು ಸ್ಮರಿಸುತ್ತಿದ್ದೇನೆ. ಅವರು ದೇಶಕ್ಕೆ ನೀಡಿದ ಅಪಾರ ಸೇವೆಯೇ ನಮಗೆ ಸ್ಫೂರ್ತಿ. ಭಾರತವನ್ನು ಸದೃಢ ಮತ್ತು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸಲು ತಮ್ಮ ಬದುಕನ್ನೇ ಮುಡಿಪಾಗಿರಿಸಿದರು. ಅವರ ಅಭಿವೃದ್ಧಿ ಪರ ಕಾರ್ಯಗಳು ಲಕ್ಷಾಂತರ ಭಾರತೀಯರನ್ನು ಧನಾತ್ಮಕವಾಗಿ ಪ್ರಭಾವಿಸಿವೆ' ಎಂದು ಉಲ್ಲೇಖಿಸಿದ್ದಾರೆ.

ವಾಜಪೇಯಿ 1998ರಿಂದ 2004ರ ವರೆಗೆ ಅಧಿಕಾರದಲ್ಲಿದ್ದಎನ್‌ಡಿಎ ನೇತೃತ್ವದ ಸರ್ಕಾರವನ್ನು ಮುನ್ನಡೆಸಿದ್ದರು. ಅದರೊಂದಿಗೆ ಅವರು ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಬಿಜೆಪಿಯ ಮೊದಲ ನಾಯಕ ಎನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.