ಜೈಪುರ: ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾಗಿದ್ದು, ಕೋಮು ಸೌಹಾರ್ದತೆ ಕದಡುವ ಮೂಲಕ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಹೇಳಿದ್ದಾರೆ.
ಗುರುವಾರದಂದು 2.8 ಕಿ.ಮೀ. ಎತ್ತರದ 'ಭಾರತ್ ಜೋಡೊ ಸೇತು' ರಸ್ತೆ ಉದ್ಘಾಟಿಸಿ ಮಾತನಾಡಿದ ಅವರು, ಈ ಹೆಸರು ಶಾಂತಿಯ ಸಂದೇಶವನ್ನು ರವಾನಿಸಲಿದೆ. ದೇಶದಲ್ಲಿ ಆತಂಕಕಾರಿ ಪರಿಸ್ಥಿತಿಯಿದ್ದು, ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಕೋಮು ಸೌಹಾರ್ದತೆ ಕದಡಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ್ ಜೋಡೊ ಸೇತು ಎಂದು ಕರೆಯುವುದು ಧನಾತ್ಮಕ ಸಂದೇಶವನ್ನು ನೀಡಲಿದೆ ಎಂದು ಹೇಳಿದರು.
ದ್ವೇಷವನ್ನು ಕೊನೆಗೊಳಿಸಿ ಭಾತೃತ್ವದ ಸಂದೇಶ ರವಾನಿಸುವುದು ಭಾರತ್ ಜೋಡೊ ಯಾತ್ರೆಯ ಉದ್ದೇಶವಾಗಿದೆ. ಇದರ ನೆನಪಿಗಾಗಿ ಭಾರತ್ ಜೋಡೊ ಸೇತು ಎಂದು ಹೆಸರಿಸಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಸೆಪ್ಟೆಂಬರ್ 7ರಂದು ಆರಂಭವಾಗಿರುವ ಭಾರತ್ ಜೋಡೊ ಯಾತ್ರೆ, 150 ದಿನಗಳ ಪರ್ಯಂತ 3,570 ಕಿ.ಮೀ. ಕ್ರಮಿಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕೊನೆಗೊಳ್ಳಲಿದೆ.
ಅಂದ ಹಾಗೆ ₹250 ಕೋಟಿ ವೆಚ್ಚದಲ್ಲಿ ಭಾರತ್ ಜೋಡೊ ಸೇತು ರಸ್ತೆ ನಿರ್ಮಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.