ADVERTISEMENT

ಮುಂಬೈ ದಾಳಿ ಮಾದರಿಯ ಮತ್ತೊಂದು ದಾಳಿ ಅಸಾಧ್ಯ: ರಾಜನಾಥ್‌ ಸಿಂಗ್‌

ಪಿಟಿಐ
Published 26 ನವೆಂಬರ್ 2020, 16:02 IST
Last Updated 26 ನವೆಂಬರ್ 2020, 16:02 IST
ರಾಜನಾಥ್‌ ಸಿಂಗ್‌
ರಾಜನಾಥ್‌ ಸಿಂಗ್‌   

ನವದೆಹಲಿ: ಕಳೆದ ಕೆಲ ವರ್ಷಗಳಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ವ್ಯವಸ್ಥೆಯು ಸದೃಢವಾಗಿದ್ದು, 2008ರ ನವೆಂಬರ್‌ 26ರಂದು ಮುಂಬೈನಲ್ಲಿ ಉಗ್ರರು ನಡೆಸಿದ ದಾಳಿಯ ಮಾದರಿಯ ಮತ್ತೊಂದು ದಾಳಿ ಭಾರತದಲ್ಲಿ ಅಸಾಧ್ಯ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಗುರುವಾರ ಹೇಳಿದರು.

ಹಿಂದೂಸ್ತಾನ್‌ ಟೈಮ್ಸ್‌ನ ಲೀಡರ್‌ಶಿಪ್‌ ಶೃಂಗಸಭೆಯಲ್ಲಿ ಮಾತನಾಡಿದ ಸಿಂಗ್‌, ‘ಭಾರತ–ಚೀನಾ ಗಡಿಯಲ್ಲಿರುವ ವಾಸ್ತವ ನಿಯಂತ್ರಣ ರೇಖೆಯಲ್ಲಿ ಬದಲಾವಣೆ ತರಲು ಪ್ರಯತ್ನಿಸಿದರೆ ತಕ್ಕ ಕ್ರಮ ಕೈಗೊಳ್ಳಲು ಭಾರತೀಯ ಸೇನೆಗಳಿಗೆ ಅವಕಾಶ ನೀಡಲಾಗಿದ್ದು, ಭಾರತದ ಗೌರವಕ್ಕೆ ಧಕ್ಕೆ ಬರಲು ಸರ್ಕಾರ ಬಿಡುವುದಿಲ್ಲ’ ಎಂದು ಹೇಳಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ, ಭಾರತದ ಗೌರವ, ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಯ ಬಗ್ಗೆ ಯಾವುದೇ ರಾಜಿ ಇಲ್ಲ. ಕಳೆದ ಕೆಲ ವರ್ಷಗಳಲ್ಲಿ ಭಾರತವು ತನ್ನ ಭದ್ರತಾ ವ್ಯವಸ್ಥೆಯನ್ನು ಸದೃಢಗೊಳಿಸಿದ್ದು, ಭಯೋತ್ಪಾದಕರಿಗೆ ಭಾರತವು ಬಹಳ ಸುಲಭವಾದ ಗುರಿಯಾಗಿಲ್ಲ. ಆಂತರಿಕ ಭದ್ರತೆಯೂ ಸದೃಢವಾಗಿದ್ದು, ಭಾರತದ ನೆಲದಲ್ಲಿ ಮತ್ತೊಂದು 26/11 ಮಾದರಿಯ ದಾಳಿ ಅಸಾಧ್ಯ’ ಎಂದರು.

ADVERTISEMENT

ಇದೇ ವೇಳೆ ಪಾಕಿಸ್ತಾನವನ್ನು ‘ಭಯೋತ್ಪಾದಕರ ನರ್ಸರಿ’ ಎಂದೂ ಟೀಕಿಸಿದ ರಾಜನಾಥ್‌ ಸಿಂಗ್‌, ಇತ್ತೀಚೆಗೆ ಪಾಕಿಸ್ತಾನ ಮೂಲದ ಉಗ್ರರನ್ನು ನಗ್ರೋಟಾದಲ್ಲಿ ಹೊಡೆದುರುಳಿಸಿರುವುದನ್ನೂ ಉಲ್ಲೇಖಿಸಿದರು. ‘ಉರಿ ಹಾಗು ಪುಲ್ವಾಮಾ ದಾಳಿಯ ಬಳಿಕ ಭಾರತವು ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಭಯೋತ್ಪಾದನೆಯನ್ನು ಬೆಂಬಲಿಸುವವರ ವಿರುದ್ಧವೂ ನಾವು ಕಠಿಣ ಕ್ರಮ ಕೈಗೊಂಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.