ADVERTISEMENT

‘ಅಮೃತಬಳ್ಳಿ ಔಷಧದಿಂದ ಜಠರಕ್ಕೆ ಹಾನಿ’: ಅಧ್ಯಯನ ವರದಿಯಲ್ಲಿ ಉಲ್ಲೇಖ

ಕೋವಿಡ್‌ ಪ್ರತಿರೋಧಕವಾಗಿ ಬಳಕೆಗೆ ಉತ್ತೇಜಿಸಿದ್ದ ಆಯುಷ್

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 18:18 IST
Last Updated 7 ಮಾರ್ಚ್ 2022, 18:18 IST
ಅಮೃತಬಳ್ಳಿ
ಅಮೃತಬಳ್ಳಿ   

ನವದೆಹಲಿ: ಕೋವಿಡ್‌–19 ವಿರುದ್ಧ ರೋಗ ನಿರೋಧಕ ಶಕ್ತಿ ವೃದ್ಧಿಗಾಗಿ ಬಳಸುವಂತೆ ಆಯುಷ್ ಇಲಾಖೆಯು ಉತ್ತೇಜಿಸಿದ್ದ ಅಮೃತಬಳ್ಳಿ ಆಧರಿತ ಗುಳಿಗೆ ಮತ್ತು ಪುಡಿಯನ್ನು (ಗಿಲಾಯ್) ಸೇವಿಸಿದ್ದ ಹಲವರ ಜಠರಕ್ಕೆ ಹಾನಿಯಾಗಿದೆ ಎಂದು ಅಧ್ಯಯನ ವರದಿ ಹೇಳಿದೆ. ದೇಶದ ಹಲವು ಆಸ್ಪತ್ರೆಗಳ ತಜ್ಞ ವೈದ್ಯರ ತಂಡವು ಈ ಅಧ್ಯಯನವನ್ನು ನಡೆಸಿತ್ತು.

ದೇಶದ 12 ನಗರಗಳಲ್ಲಿನ ಆಸ್ಪತ್ರೆಗಳಲ್ಲಿ ಈ ಅಧ್ಯಯನ ನಡೆಸಲಾಗಿದೆ. ಅಧ್ಯಯನಕ್ಕೆ ಒಳಪಡಿಸಿದವರಲ್ಲಿ 43 ಜನರ ಜಠರಕ್ಕೆ ಹಾನಿಯಾಗಿದೆ. ಈ ಜನರ ಜಠರದಲ್ಲಿ ಗಿಲಾಯ್ ವಿಷಕಾರಿಯಾಗಿ ಪರಿಣಮಿಸಿದೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

2021ರಲ್ಲಿ ಇದೇ ಔಷಧಗಳನ್ನು ಬಳಸಿದ್ದವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಆಗಲೂ ಆರು ಜನರ ಜಠರಕ್ಕೆ ಹಾನಿಯಾಗಿದ್ದದ್ದು ಪತ್ತೆಯಾಗಿತ್ತು. ಈ ಬಗ್ಗೆ ಅಧ್ಯಯನ ವರದಿ ಪ್ರಕಟವಾಗಿತ್ತು. ಆನಂತರದ ಒಂಬತ್ತು ತಿಂಗಳಲ್ಲಿ ಆಯುಷ್‌, ಗಿಲಾಯ್ ಅತಿಹೆಚ್ಚು ಬಳಕೆಯಿಂದ ಜಠರಕ್ಕೆ ಹಾನಿಯಾಗಿದೆ ಎಂದು ಮೂರು ಬಾರಿ ಪ್ರಕಟಣೆ ಹೊರಡಿಸಿದೆ. ಆದರೆ, ಗಿಲಾಯ್‌ನ ಸುರಕ್ಷಿತ ಬಳಕೆಯ ಪ್ರಮಾಣ ಎಷ್ಟು ಎಂಬುದನ್ನು ಆಯುಷ್ ಸ್ಪಷ್ಟಪಡಿಸಿಲ್ಲ.

ADVERTISEMENT

ಗಿಲಾಯ್‌ನ ಅತಿಹೆಚ್ಚು ಬಳಕೆಯಿಂದ ಜಠರಕ್ಕೆ ಹಾನಿಯಾಗಿಲ್ಲ ಎಂದುಈ ಅಧ್ಯಯನ ವರದಿಯು ಹೇಳುತ್ತದೆ.‘ಈ ರೋಗಿಗಳ ಜಠರದಲ್ಲಿ ಗಾಯಗಳಾಗಿದ್ದು, ಗಿಲಾಯ್‌ನ ಅತಿಹೆಚ್ಚು ಬಳಕೆಯಿಂದ ಆದ ಹಾನಿಯಂತೆ ಅದು ಗೋಚರಿಸುತ್ತಿಲ್ಲ. ಬದಲಿಗೆ ಯಾವುದೇ ಪ್ರಮಾಣದಲ್ಲಿ, ಯಾವುದೇ ಅವಧಿಯಲ್ಲಿ ಬಳಸಿದರೂ ಉಂಟಾಗುವ ಗಾಯಗಳಂತೆ ಇವೆ. ಇದು ರೋಗ ನಿರೋಧಕ ಶಕ್ತಿಯು ಸ್ವಯಂಚಾಲಿತವಾಗಿ ಬಿಡುಗಡೆಯಾದ್ದರಿಂದ ಉಂಟಾದ ಗಾಯಗಳಂತೆ ಇವೆ’
ಎಂದು ಅಲುವಾದಲ್ಲಿನ ರಾಜಗಿರಿ ಹಾಸ್ಪಿಟಲ್‌ನ ಜಠರತಜ್ಞ ಸಿರಿಯಾಕ್ ಅಬೇ ಫಿಲಿಪ್ಸ್‌ ಹೇಳಿದ್ದಾರೆ. ಈ ಅಧ್ಯಯನ ತಂಡವನ್ನು ಫಿಲಿಪ್ಸ್
ಮುನ್ನಡೆಸಿದ್ದರು.

‘ಸ್ವಯಂಚಾಲಿತವಾಗಿ ರೋಗ ನಿರೋಧಕ ಶಕ್ತಿ ಜಾಗೃತವಾಗುವ ಸಮಸ್ಯೆ ಇರುವವರಲ್ಲಿ ಗಿಲಾಯ್‌ನಿಂದ ಅಪಾಯವಾಗುವ ಸಂಭವವಿದೆ. ಇದರಿಂದ ದೇಹದ ಹಲವು ಅಂಗಗಳು, ಮುಖ್ಯವಾಗಿ ಜಠರದ ಪ್ರತಿರೋಧಕ ಶಕ್ತಿಯು ಮಾರ್ಪಾಡಾಗುವ ಸಾಧ್ಯತೆ ಇರುತ್ತದೆ. ಆ ಮೂಲಕ ಆ ಅಂಗಕ್ಕೆ ಹಾನಿಯಾಗುವ ಅಪಾಯವಿರುತ್ತದೆ. ಹೀಗಾಗಿರಕ್ತದೊತ್ತಡ, ಮಧುಮೇಹ ಮತ್ತು ಸಂಧಿವಾತದಂತಹ ಸಮಸ್ಯೆ ಇರುವವರು ಗಿಲಾಯ್ ಸೇವೆನೆಗೂ ಮುನ್ನ ಎಚ್ಚರಿಕೆ ವಹಿಸಬೇಕು’ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಕೇಳಲು ಆಯುಷ್‌ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾಅವರನ್ನು ಸಂಪರ್ಕಿಸಲಾಯಿತು. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಆದರೆ ಈ ಅಧ್ಯಯನ ವರದಿಗಳು ಪ್ರಕಟವಾದ ನಂತರ ಆಯುಷ್‌ ಸಚಿವಾಲಯವೇ ಸ್ಪಷ್ಟೀಕರಣ ನೀಡಿತ್ತು. ‘ಗಿಲಾಯ್ ಅನ್ನು ಬಹಳ ಹಿಂದಿನಿಂದ ಆಯುರ್ವೇದ ರೋಗ ನಿರೋಧಕ ಶಕ್ತಿವರ್ಧಕವಾಗಿ ಬಳಸಲಾಗುತ್ತಿದೆ. ಹೀಗಾಗಿ ಕೋವಿಡ್‌–19 ವಿರುದ್ಧ ಇದನ್ನು ಬಳಸಲಾಗುತ್ತಿದೆ. ಇದು ವಿಷಕಾರಿ ಎಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದು ಆಯುಷ್
2022ರ ಫೆಬ್ರುವರಿ 16ರಂದು ಹೇಳಿತ್ತು.

2021ರ ಜುಲೈ 7ರಂದು, ‘ಗಿಲಾಯ್ ಬಳಕೆಯಿಂದ ಜಠರಕ್ಕೆ ಹಾನಿಯಾಗುತ್ತದೆ ಎಂಬುದು ದಾರಿ ತಪ್ಪಿಸುವಂತಹ ವಿಷಯ’ ಎಂದು ಆಯುಷ್ ಹೇಳಿತ್ತು.

‘ಶಕ್ತಿ ವೃದ್ಧಿಸುವುದಿಲ್ಲ’

‘ರೋಗ ನಿರೋಧಕ ಶಕ್ತಿ ವೃದ್ಧಕ ಎಂದು ಮಾರಾಟ ಮಾಡಲಾಗುವ ಔಷಧಗಳಲ್ಲಿ ಬಹುತೇಕವು, ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವುದಿಲ್ಲ. ಇದು ಒಂದು ದೊಡ್ಡ ಸಮಸ್ಯೆಯಾಗಿದೆ. ಗಿಲಾಯ್ ಅನ್ನು ಸಹ ಇದೇ ರೀತಿಯಲ್ಲಿ ಇದೇ ರೀತಿ ಮಾರಾಟ ಮಾಡಲಾಗುತ್ತಿದೆ. ಎಲ್ಲಾ ಔಷಧಗಳನ್ನು ದೀರ್ಘಾವಧಿಯ ಪರೀಕ್ಷೆಗೆ ಒಳಪಡಿಸಬೇಕು. ಆದರೆ, ಸಂಬಂಧಿತ ಪ್ರಾಧಿಕಾರಗಳು ಮಾನ್ಯತೆ ನೀಡುವಲ್ಲಿ ಈ ಔಷಧವನ್ನು ಸುಮ್ಮನೆ ಮುಂದಕ್ಕೆ ತಳ್ಳಲಾಗಿದೆ. ಇದು ಸರಿಯಲ್ಲ’ ಎಂದು ದೆಹಲಿಯ ರಾಷ್ಟ್ರೀಯ ರೋಗನಿರೋಧಕ ಶಕ್ತಿ ಸಂಸ್ಥೆಯ ನಿವೃತ್ತ ರೋಗನಿರೋಧಕಶಕ್ತಿ ತಜ್ಞ
ಸತ್ಯಜಿತ್ ರಥ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.