ADVERTISEMENT

ಎಲ್ಗಾರ್ ಪರಿಷತ್ ಪ್ರಕರಣ: ಐವರು ಆರೋಪಿಗಳಿಗೆ ಜಾಮೀನು ನಿರಾಕರಣೆ

ಪಿಟಿಐ
Published 8 ಜುಲೈ 2022, 13:59 IST
Last Updated 8 ಜುಲೈ 2022, 13:59 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಮುಂಬೈ:ಎಲ್ಗಾರ್‌ ಪರಿಷತ್– ಮಾವೋವಾದಿ ಸಂಪರ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ತಜ್ಞೆ ಶೋಮಾ ಸೇನ್ ಮತ್ತು ಇತರ ನಾಲ್ವರು ಆರೋಪಿಗಳಿಗೆ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಿಶೇಷ ನ್ಯಾಯಾಲಯವು ಜಾಮೀನು ನಿರಾಕರಿಸಿದೆ.

ಎನ್ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ ಜೆ. ಕಟಾರಿಯಾ ಅವರು, ಪ್ರೊ.ಶೋಮಾ ಸೇನ್, ಸುಧೀರ್ ದಾವಾಲೆ, ಸಾಮಾಜಿಕ ಕಾರ್ಯಕರ್ತ ರೋನಾ ವಿಲ್ಸನ್, ವಕೀಲ ಸುರೇಂದ್ರ ಗಡ್ಲಿಂಗ್ ಮತ್ತು ಮಹೇಶ್ ರಾವುತ್ ಅವರಿಗೆ ಮಂಗಳವಾರ ಜಾಮೀನು ನೀಡಲು ನಿರಾಕರಿಸಿದ್ದರು. ಅಂದು ನೀಡಿದ್ದ ಆದೇಶದ ವಿವರಣೆಯು ಶುಕ್ರವಾರ ಲಭ್ಯವಾಗಿದೆ.

‘ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಗಳು ನಾಲ್ಕು ವರ್ಷಗಳ (2018) ಹಿಂದೆ ಸಲ್ಲಿಸಿದ ಅರ್ಜಿಯ ವಿಚಾರಣೆಯೇ ನಡೆದಿಲ್ಲ. ಇಷ್ಟೊಂದು ದೀರ್ಘಕಾಲ ಅರ್ಜಿಯು ವಿಚಾರಣೆಗೆ ಬಾರದಿರುವ ಅಥವಾ ವರ್ಗಾಯಿಸದ ಬಗ್ಗೆ ಆರೋಪಿಗಳು ಯಾವುದೇ ವಿವರಣೆಯನ್ನೂ ನೀಡಿಲ್ಲ. ಹಾಗಾಗಿ, ಅವರ ಕಡೆಯಿಂದ ಆದ ತಪ್ಪಿನ ಲಾಭವನ್ನು ಪಡೆಯಲು ಸಾಧ್ಯವಿಲ್ಲ’ ಎಂದೂ ನ್ಯಾಯಾಲಯವು ವಿವರಿಸಿದೆ.

ADVERTISEMENT

2018ರಲ್ಲಿ ಪುಣೆಯ ಸೆಷೆನ್ಸ್ ನ್ಯಾಯಾಲಯದಲ್ಲಿನ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾಗ ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

ಆರೋಪಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಜಾಮೀನು ಅರ್ಜಿಯಲ್ಲಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್ ಸಲ್ಲಿಸಲು ಸೆಷನ್ಸ್ ನ್ಯಾಯಾಲಯವು ನೀಡಿದ್ದ 90 ದಿನಗಳ ವಿಸ್ತರಣೆಯು ಕಾನೂನುಬಾಹಿರವೆಂದು ಪ್ರತಿಪಾದಿಸಿದ್ದರು. ಈ ಕಾರಣಕ್ಕಾಗಿ ಆರೋಪಿಗಳು ಸಿಆರ್‌ಪಿಸಿಯ ನಿಬಂಧನೆಗಳ ಅಡಿಯಲ್ಲಿ ಜಾಮೀನಿಗೆ ಅರ್ಹರಾಗಿದ್ದಾರೆ ಎಂದೂ ಅರ್ಜಿಯಲ್ಲಿ ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.