ಭಾಗ್ಪತ್ (ಉತ್ತರ ಪ್ರದೇಶ) (ಪಿಟಿಐ): ಫೆಬ್ರುವರಿ 26ರಂದು ಪಾಕಿಸ್ತಾನದ ಬಾಲಾಕೋಟ್ನಲ್ಲಿ ನಡೆದ ದಾಳಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ‘ಲಂಕಾ ದಹನ’ಕ್ಕೆ ಹೋಲಿಸಿದ್ದಾರೆ.
‘ವಾಯುಪಡೆಯ ಪರಾಕ್ರಮ ತ್ರೇತಾಯುಗವನ್ನು ನೆನಪಿಸಿತು. ಹನುಮಂತ ಲಂಕೆಯನ್ನು ದಹನ ಮಾಡಿದ ರೀತಿಯಲ್ಲೇಪಾಕಿಸ್ತಾನದ ಉಗ್ರರ ಶಿಬಿರಗಳನ್ನು ಸೇನೆ ನಾಶಗೊಳಿಸಿತು’ ಎಂದು ಯೋಗಿ ಹೇಳಿದ್ದಾರೆ.
‘ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಪ್ರಧಾನಿ ಇದ್ದಿದ್ದರಿಂದ ಅದು ಸಾಧ್ಯ ವಾಯಿತು. ಮೋದಿ ಅವರ ನಾಯಕತ್ವದಲ್ಲಿ ಆರ್ಥಿಕ ಹಾಗೂ ಸೇನಾ ಶಕ್ತಿಯಾಗಿ ಭಾರತ ಗಮನಾರ್ಹ ಸಾಧನೆ ಮಾಡುವಂತಾಗಿದೆ’ ಎಂದು ಅವರು ಹೇಳಿದ್ದಾರೆ.
ಜಾಟರು, ಗುಜ್ಜರರ ಗತಿಯೇನು:ದೇಶದ ಸಂಪನ್ಮೂಲಗಳ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕು ಎಂದಾದರೆ ಜಾಟರು, ಗುಜ್ಜರರು ಎಲ್ಲಿಗೆ ಹೋಗಬೇಕು ಎಂದು ಯೋಗಿ ಅವರು ಪ್ರಶ್ನಿಸಿದ್ದಾರೆ.
2006ರಲ್ಲಿ ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ನೀಡಿದ್ದ ಹೇಳಿಕೆಯನ್ನು ಯೋಗಿ ತಮ್ಮ ಭಾಷಣದಲ್ಲಿ ಎಳೆದು ತಂದಿದ್ದಾರೆ. ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಅವರು ಮಾತನಾಡಿದರು. ಈ ಭಾಗದಲ್ಲಿ ಜಾಟರು ಹಾಗೂ ಗುಜ್ಜರ್ ಮತದಾರರ ಸಂಖ್ಯೆ ಶೇ 25ರಷ್ಟಿದೆ.
‘ಮುಸ್ಲಿಮರಿಗೆ ಆದ್ಯತೆ ಎಂದಾದರೆ, ಪರಿಶಿಷ್ಟ ಜಾತಿಯವರು, ಹಿಂದುಳಿದವರು, ಹಾಗೂ ಇತರೆ ಜನಾಂಗದವರು ಎಲ್ಲಿಗೆ ಹೋಗಬೇಕು’ ಎಂದು ಯೋಗಿ ಕೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.