ನವದೆಹಲಿ: ಸರ್ಕಾರದ ನಿರ್ಮಾಣ ಯೋಜನೆಗಳಲ್ಲಿ ಸುಟ್ಟ ಮಣ್ಣಿನ ಇಟ್ಟಿಗೆಗಳ ಬಳಕೆಯನ್ನು ನಿಷೇಧಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಪರಿಸರಸ್ನೇಹಿ ಉತ್ಪನ್ನಗಳಿಗೆ ಉತ್ತೇಜನ ನೀಡುವುದು ಇದರ ಉದ್ದೇಶ.
ಸುಣ್ಣ ಮಣ್ಣಿನ ಇಟ್ಟಿಗೆಗಳನ್ನು ನಿಷೇಧಿಸಲು ಸಾಧ್ಯವೇ ಎಂದು ಪರಿಶೀಲಿಸುವಂತೆ ಕೇಂದ್ರ ಲೋಕೋಪಯೋಗಿ (ಸಿಪಿಡಬ್ಲ್ಯುಡಿ) ಇಲಾಖೆಗೆ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಸೂಚನೆ ನೀಡಿದೆ. ಈ ಬಗ್ಗೆ ಪರಿಶೀಲಿಸಿ ಮಂಗಳವಾರದ ಒಳಗೆ ವರದಿ ಸಲ್ಲಿಸಲುಸಿಪಿಡಬ್ಲ್ಯುಡಿ ತನ್ನ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ ಎಂದು ಮೂಲಗಳು ಹೇಳಿವೆ.
‘ತ್ಯಾಜ್ಯವನ್ನು ಬಳಸಿ ಪರಿಸರಸ್ನೇಹಿ ಇಟ್ಟಿಗೆ ತಯಾರಿಸುವ ತಂತ್ರಜ್ಞಾನ ಲಭ್ಯವಿದೆ. ಇದರ ಬಳಕೆ ತ್ಯಾಜ್ಯದ ಸಮಸ್ಯೆಗೆ ಪರಿಹಾರ ಒದಗಿಸುವುದರ ಜತೆಗೆ ಪರಿಸರಸ್ನೇಹಿ ಉತ್ಪನ್ನಗಳ ತಯಾರಿಕೆಗೂ ಪ್ರೋತ್ಸಾಹ ನೀಡುತ್ತದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇಟ್ಟಿಗೆ ಸುಡಲು ಇಟ್ಟಿಗೆ ಗೂಡುಗಳಲ್ಲಿ ಕಲ್ಲಿದ್ದಲು ಬಳಸಲಾಗುತ್ತದೆ. ಇದು ವಾಯುಮಾಲಿನ್ಯಕ್ಕೆ ಕಾರಣವಾಗುತ್ತದೆ.
ಸುಪ್ರೀಂ ಕೋರ್ಟ್ ನೇಮಿಸಿದ ಉನ್ನತಾಧಿಕಾರ ಸಮಿತಿಯು ಇಟ್ಟಿಗೆ ಗೂಡುಗಳಲ್ಲಿ ಮಾಲಿನ್ಯವನ್ನು ಶೇ 80ರಷ್ಟು ತಗ್ಗಿಸುವ ಜಿಗ್ಜ್ಯಾಗ್ ತಂತ್ರಜ್ಞಾನ ಬಳಸಬೇಕು ಎಂದು ರಾಷ್ಟ್ರ ರಾಜಧಾನಿ ಸುತ್ತಲಿನ ರಾಜ್ಯಗಳಿಗೆ ಅಕ್ಟೋಬರ್ನಲ್ಲಿ ಸೂಚಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.