ನವದೆಹಲಿ: ‘ಮದುವೆ, ವಿಚ್ಛೇದನ ಹಾಗೂ ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ಏಕರೂಪ ನಾಗರಿಕ ಸಂಹಿತೆಯನ್ನು ರೂಪಿಸುವುದು ಇಂದಿನ ತುರ್ತು’ ಎಂದು ದೆಹಲಿ ಹೈಕೋರ್ಟ್ ಪ್ರತಿಪಾದಿಸಿದೆ.
‘ಈಗ ಹಲವಾರು ವೈಯಕ್ತಿಕ ಕಾನೂನುಗಳು ಜಾರಿಯಲ್ಲಿವೆ. ಇವುಗಳು ಸೃಷ್ಟಿಸುವ ಸಂಘರ್ಷ, ವಿರೋಧಾಭಾಸಗಳಿಂದ ನಾಗರಿಕರು ತೊಂದರೆ ಅನುಭವಿಸುವುದನ್ನು ತಪ್ಪಿಸಬೇಕಾದರೆ, ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದು ಅಗತ್ಯ ’ ಎಂದು ನ್ಯಾಯಮೂರ್ತಿ ಪ್ರತಿಭಾ ಎಂ.ಸಿಂಗ್ ಅವರಿರುವ ಏಕಸದಸ್ಯ ನ್ಯಾಯಪೀಠ ಹೇಳಿತು.
‘ದೇಶಕ್ಕೆ ಏಕರೂಪ ನಾಗರಿಕ ಸಂಹಿತೆ ಅಗತ್ಯ ಎಂಬುದನ್ನು ಸಂವಿಧಾನದ 44ನೇ ವಿಧಿಯ ಆಶಯ. ಇದು ಕೇವಲ ಭರವಸೆಯಾಗಿ ಉಳಿಯಬಾರದು ಎಂಬುದು ಸಹ ಇದೇ ವಿಧಿ ಹೇಳುತ್ತದೆ. ಇಂಥ ಸಂಹಿತೆಯನ್ನು ರೂಪಿಸಿ, ಜಾರಿಗೊಳಿಸಬೇಕು ಎಂದು ಅನೇಕ ಪ್ರಕರಣಗಳಿಗೆ ಸಂಬಂಧಿಸಿ, ತೀರ್ಪುಗಳನ್ನು ಪ್ರಕಟಿಸಿದ ಸಂದರ್ಭಗಳಲ್ಲಿ ಸುಪ್ರೀಂಕೋರ್ಟ್ ಈ ಆಶಯವನ್ನು ಪುನರುಚ್ಚರಿಸುತ್ತಲೇ ಬಂದಿದೆ’ ಎಂದು ನ್ಯಾಯಮೂರ್ತಿ ಪ್ರತಿಭಾ ಸಿಂಗ್ ಹೇಳಿದರು.
‘ಸಮಾಜದಲ್ಲಿ ಈಗ ಸಾಕಷ್ಟು ಬದಲಾವಣೆ ಕಾಣಬಹುದು. ಧರ್ಮ, ಜಾತಿ ಹಾಗೂ ಸಮುದಾಯಗಳೆಂಬ ಬೇಲಿಗಳು ಕಣ್ಮರೆಯಾಗುತ್ತಿವೆ. ಸಮಾನತೆ ಮನೆ ಮಾಡುತ್ತಿದೆ. ಹೀಗಾಗಿ ಮದುವೆ, ವಿಚ್ಛೇದನ ಹಾಗೂ ಆಸ್ತಿಗಳ ಉತ್ತರಾಧಿಕಾರಕ್ಕೆ ಸಂಬಂಧಪಟ್ಟಂತೆ ಏಕರೂಪ ಸಂಹಿತೆ ಅಗತ್ಯ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.