ADVERTISEMENT

ಚುನಾವಣೆ | BJP Vs TMC: ಬಂಗಾಳದಲ್ಲಿ ರಾಜಕೀಯ ಬಣ್ಣ ಪಡೆದುಕೊಂಡ "ದುರ್ಗಾ ಪೂಜೆ"

ಏಜೆನ್ಸೀಸ್
Published 15 ಅಕ್ಟೋಬರ್ 2020, 8:54 IST
Last Updated 15 ಅಕ್ಟೋಬರ್ 2020, 8:54 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳುಗರಿಗೆದರುತ್ತಿದ್ದು,ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್‌ ನಡುವೆ‘ದುರ್ಗಾ ಪೂಜೆ’ ರಾಜಕೀಯ ಬಣ್ಣ ಪಡೆದುಕೊಂಡಿದೆ.

ರಾಜ್ಯದಲ್ಲಿ ದುರ್ಗಾ ಪೂಜೆ ಪೆಂಡಾಲ್‌ ಉದ್ಘಾಟನೆಗೆ ಬಿಜೆಪಿ ಮತ್ತು ಟಿಎಂಸಿ ನಡುವೆ ಪೈಪೋಟಿ ಏರ್ಪಟ್ಟಿದೆ. ಗುರುವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸುಮಾರು 21 ದುರ್ಗಾ ಪೂಜೆ ಪೆಂಡಾಲ್‌ಗಳನ್ನು ಉದ್ಘಾಟನೆ ಮಾಡುತ್ತಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ವರ್ಚುವಲ್‌ ವಿಡಿಯೊ ಮೂಲಕ ಸಾವಿರಕ್ಕೂ ಹೆಚ್ಚುಪೆಂಡಾಲ್‌ಗಳನ್ನು ಉದ್ಘಾಟನೆ ಮಾಡುತ್ತಿದ್ದಾರೆ. ಆ ಮೂಲಕ ಹಿಂದೂ ಮತಬ್ಯಾಂಕ್‌ಗೆ ಲಗ್ಗೆ ಹಾಕಿ ಬಿಜೆಪಿ ಪೆಟ್ಟು ಕೊಡುವುದೇ ಮುಖ್ಯ ದೀದಿಯ ಮುಖ್ಯ ಉದ್ದೇಶವಾಗಿದೆ.

ಮಮತಾ ಬ್ಯಾನರ್ಜಿ ಅವರು ತಮ್ಮ ಆಡಳಿತಾವಧಿಯಲ್ಲಿ ಇದೇ ಮೊದಲ ಬಾರಿಗೆ ಸಾವಿರಕ್ಕೂ ಹೆಚ್ಚು ದುರ್ಗಾ ಪೂಜೆ ಪೆಂಡಾಲ್‌ಗಳನ್ನು ಉದ್ಘಾಟಿಸುತ್ತಿದ್ದಾರೆ. ಬಿಜೆಪಿ ಕಡೆ ಹರಿದು ಹೋಗಿರುವಹಿಂದೂ ಮತಗಳನ್ನು ಸೆಳೆಯುವ ರಾಜಕೀಯ ಲೆಕ್ಕಾಚಾರವಾಗಿದೆ. ರಾಜ್ಯದಲ್ಲಿ ನೋಂದಾಯಿತ 37 ಸಾವಿರ ದುರ್ಗಾ ಪೂಜೆ ಸಮಿತಿ ( ದುರ್ಗಾ ಪೂಜೆ ಪೆಂಡಾಲ್‌) ಗಳಿವೆ. ಪ್ರತಿಯೊಂದು ಸಮಿತಿಗೂ ಮಮತಾ ಬ್ಯಾನರ್ಜಿ₹ 50 ಸಾವಿರ ಹಣಕಾಸು ನೆರವು ಕೊಟ್ಟಿರುವುದು ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ADVERTISEMENT

ಇತ್ತ ಬಿಜೆಪಿ ರಾಜ್ಯ ಘಟಕ ಕೂಡ ಸ್ಥಳೀಯವಾಗಿ ‘ದುರ್ಗಾ ಪೂಜೆ’ ಪೆಂಡಾಲ್‌ಗಳನ್ನು ಉದ್ಘಾಟನೆ ಮಾಡುತ್ತಿದೆ. ಅಕ್ಟೋಬರ್‌ 22ರಂದ ಮಹಿಳಾ ಬಿಜೆಪಿ ಘಟಕ ಹಮ್ಮಿಕೊಂಡಿರುವ ದುರ್ಗಾ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿದ್ದಾರೆ. ನಂತರದ 5 ದಿನಗಳು ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಕಳೆದ ಸಲ ಇಲ್ಲಿನ ಸಾಲ್ಟ್‌ಲೇಕ್‌ ದುರ್ಗಾ ಪೂಜೆ ಪೆಂಡಾಲ್‌ ಅನ್ನು ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಉದ್ಘಾಟನೆ ಮಾಡಿದ್ದರು.

ಈ ಸಲದ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿಯನ್ನು ಅಧಿಕಾರದಿಂದ ಕೆಳಗಿಸುವ ಕಾರ್ಯತಂತ್ರವನ್ನು ರೂಪಿಸಿದ್ದ ಬಿಜೆಪಿಗೆ ಮಮತಾ ಬ್ಯಾನರ್ಜಿ ದುರ್ಗಾ ಪೂಜೆ ಸಮಿತಿಗಳಿಗೆ ಹಣಕಾಸು ನೆರವು ನೀಡುವ ಮೂಲಕಬಲವಾದ ಪೆಟ್ಟು ಕೊಟ್ಟಿದ್ದಾರೆ. ಇನ್ನು ಟಿಎಂಸಿ ಕಾರ್ಯಕರ್ತರು ಮಮತಾ ಬ್ಯಾನರ್ಜಿಯನ್ನು ಹೋಲುವಂತಹ ದುರ್ಗಾ ಮಾತೇ ಪ್ರತಿಷ್ಟಾಪಿಸಿ ಪೂಜೆ ಸಲ್ಲಿಸಲು ಸಜ್ಜಾಗಿದ್ದಾರೆ.

ದುರ್ಗಾ ಪೂಜೆ ಬಂಗಾಳಿ ಜನರ ಶ್ರೀಮಂತ ಸಂಸ್ಕೃತಿಯಾಗಿದೆ. ಹಾಗೇ ಇಲ್ಲಿನ ಜನರ ಬದುಕಿನ ಆಂತರಿಕ ಭಾಗವಾಗಿದೆ. ಚುನಾವಣೆಯ ಈ ಸಮಯದಲ್ಲಿ ದುರ್ಗಾ ಪೂಜೆ ರಾಜಕೀಯ ಬಣ್ಣ ಪಡೆದುಕೊಂಡಿದೆ. ಮಮತಾ ಬ್ಯಾನರ್ಜಿಗೆ ಪೆಟ್ಟು ನೀಡಲು ಸ್ವತಹ ನರೇಂದ್ರ ಮೋದಿಯವರೇ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ.

ಬಂಗಾಳದಲ್ಲಿ ಅಸ್ತಿತ್ವವೇ ಇಲ್ಲದ ಬಿಜೆಪಿ ಇದೀಗ ಟಿಎಂಸಿಗೆ ಪ್ರಬಲ ಪೈಪೋಟಿ ನೀಡುವಕ್ಕೆ ಬೆಳೆದಿದೆ. ಬಲಿಷ್ಠವಾಗಿದ್ದ ಎಡಪಕ್ಷಗಳು ಮತ್ತು ಕಾಂಗ್ರೆಸ್‌ ಸಂಘಟನೆ ಕೊರತೆಯಿಂದಾಗಿ ನೆಲಕಚ್ಚಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.