ನವದೆಹಲಿ: ಆದಾಯ ತೆರಿಗೆ ಇಲಾಖೆಯು (ಐಟಿ) ಬಿಬಿಸಿ ಸುದ್ದಿಸಂಸ್ಥೆಯ ಕಚೇರಿಗಳಲ್ಲಿ ಎರಡನೇ ದಿನವೂ ‘ಪರಿಶೀಲನೆ’ ಮುಂದುವರಿಸಿತು. ಸಂಸ್ಥೆಯ ಹಣಕಾಸು ವ್ಯವಹಾರಕ್ಕೆ ಸಂಬಂಧಸಿದ ಎಲೆಕ್ಟ್ರಾನಿಕ್ ದಾಖಲೆಗಳನ್ನು ಐಟಿ ಅಧಿಕಾರಿ ಗಳು ಪ್ರತಿ ಮಾಡಿಕೊಂಡರು. ರಾಜಕೀಯ ಪಕ್ಷಗಳು, ಮಾಧ್ಯಮ ಸಂಸ್ಥೆಗಳ ಖಂಡನೆಯ ನಡುವೆಯೂ ಬುಧವಾರ ಪರಿಶೀಲನೆ ಮುಂದುವರಿಯಿತು.
ಐಟಿ ಅಧಿಕಾರಿಗಳ ತನಿಖೆಗೆ ಪೂರ್ಣ ಸಹಕಾರ ನೀಡುವಂತೆ ತನ್ನ ಸಿಬ್ಬಂದಿಗೆ ಬಿಬಿಸಿ ಸೂಚಿಸಿತ್ತು. ಕಚೇರಿಯ ಹಣಕಾಸು ಹಾಗೂ ಇತರೆ ವಿಭಾಗದ ಸಿಬ್ಬಂದಿಯನ್ನು ತನಿಖಾಧಿಕಾರಿಗಳು ಪ್ರಶ್ನಿಸಿದರು.
ಪತ್ರಕರ್ತರು ಹಾಗೂ ಇತರ ಕೆಲವು ಸಿಬ್ಬಂದಿಗೆ ಕಚೇರಿ ಯಿಂದ ಹೊರಹೋಗಲು ಮಂಗಳವಾರ ರಾತ್ರಿ ಅವಕಾಶ ನೀಡ ಲಾಗಿತ್ತು. ಅಧಿಕಾರಿಗಳು ಸಂಸ್ಥೆಯ ಕಂಪ್ಯೂಟರ್ ಹಾರ್ಡ್ಡಿಸ್ಕ್ ಹಾಗೂ ಮೊಬೈಲ್ಗಳನ್ನು ತನಿಖೆಗಾಗಿ ತೆಗೆದುಕೊಂಡು ಹೋಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುರಿತ ಸಾಕ್ಷ್ಯಚಿತ್ರವನ್ನು ಬಿಬಿಸಿ ಪ್ರಸಾರ ಮಾಡಿದ ಕೆಲ ವಾರಗಳಲ್ಲಿ ನಡೆದಿರುವ ಐಟಿ ಪರಿಶೀಲನೆಯನ್ನು ಮಾಧ್ಯಮ ಸಂಘಟನೆಗಳು ಖಂಡಿಸಿವೆ. ‘ಮೀಡಿಯ ಬಾಡೀಸ್ ನ್ಯೂಸ್ ಬ್ರಾಡ್ಕಾಸ್ಟರ್ಸ್ ಅಂಡ್ ಡಿಜಿಟಲ್ ಅಸೋಸಿಯೇಷನ್’ (ಎನ್ಬಿಡಿಎ) ಹಾಗೂ ‘ಬೃಹನ್ ಮುಂಬೈ ಯೂನಿಯನ್ ಆಫ್ ಜರ್ನಲಿಸ್ಟ್ಸ್’ ಸಂಘಟನೆಗಳು ಆದಾಯ ತೆರಿಗೆ ಇಲಾಖೆಯ ನಡೆಯನ್ನು ಖಂಡಿಸಿವೆ.
‘ಯಾವ ವ್ಯವಸ್ಥೆಯೂ ಕಾನೂನಿಗಿಂತ ದೊಡ್ದದಲ್ಲ. ಆದರೆ ಮಾಧ್ಯಮಗಳನ್ನು ಬೆದರಿಸುವ ಹಾಗೂ ಪತ್ರಕರ್ತರು, ಮಾಧ್ಯಮ ಸಂಸ್ಥೆಗಳ ಸ್ವತಂತ್ರ ಕಾರ್ಯನಿರ್ವಹಣೆಯಲ್ಲಿ ಮಧ್ಯಪ್ರವೇಶಿಸುವ ಯತ್ನಗಳನ್ನು ಖಂಡಿಸುತ್ತೇವೆ’ ಎಂದು ಎನ್ಬಿಡಿಎ ಹೇಳಿದೆ. ‘ಕೆಲವು ವಿದ್ಯಮಾನಗಳು ಹಾಗೂ ವ್ಯಕ್ತಿಗಳನ್ನು ವಿಮ ರ್ಶಾತ್ಮಕವಾಗಿ ಚಿತ್ರಿಸಿದ ಮಾಧ್ಯಮ ಸಂಸ್ಥೆಗಳ ಮೇಲೆ ಶೋಧ ನೆಯ ಅಸ್ತ್ರ ಪ್ರಯೋಗಿಸುವ ಕೇಂದ್ರ ಸರ್ಕಾರದ ನಡೆಯು,
ನಾಗರಿಕರು ಹಾಗೂ ಸಂಘಟನೆಗಳಲ್ಲಿ ಕಳವಳ ಮೂಡಿಸಿದೆ’ ಎಂದು ಬೃಹನ್ ಮುಂಬೈ ಪತ್ರಕರ್ತರ ಸಂಘಟನೆ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.