ADVERTISEMENT

ಪಶ್ಚಿಮ ಬಂಗಾಳ: ಬಿಜೆಪಿ ನಾಯಕರಿಗೆ ರಾಜ್ಯದ ಸಂಸ್ಕೃತಿ ಗೊತ್ತಿಲ್ಲವೆಂದ ಟಿಎಂಸಿ

ಪಿಟಿಐ
Published 1 ಡಿಸೆಂಬರ್ 2020, 3:19 IST
Last Updated 1 ಡಿಸೆಂಬರ್ 2020, 3:19 IST
ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ – ಪಿಟಿಐ ಚಿತ್ರ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ – ಪಿಟಿಐ ಚಿತ್ರ   

ಕೋಲ್ಕತ್ತ: ‘ರಾಜ್ಯ ಬಿಜೆಪಿಯ ಹೆಚ್ಚಿನ ನಾಯಕರಿಗೆ ಪಶ್ಚಿಮ ಬಂಗಾಳದ ಸಾಂಸ್ಕೃತಿಕ ಪರಂಪರೆಯ ಬಗ್ಗೆ ತಿಳಿದಿಲ್ಲ. 1975ರ ಹಿಂದಿ ಸಿನಿಮಾ ‘ಶೋಲೆ’ಯ ವಿಲನ್ ‘ಗಬ್ಬರ್‌ ಸಿಂಗ್’ ರೀತಿಯಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ’ ಎಂದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಟೀಕಿಸಿದೆ.

‘ಈ ನಾಯಕರಿಗೆ ಬಂಗಾಳಿ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ ಗೀತರಚನೆಕಾರರು ಮತ್ತು ಗಾಯಕರ ಬಗ್ಗೆ ತಿಳಿದಿಲ್ಲ. ರಾಜ್ಯದ ಬಗ್ಗೆ ಅವರು ತೋರ್ಪಡಿಸುತ್ತಿರುವ ಪ್ರೀತಿ ವಿಧಾನಸಭೆ ಚುನಾವಣೆ ಹಿನ್ನೆಲೆಯದ್ದೇ ವಿನಃ ನಿಜವಾದದದ್ದಲ್ಲ’ ಎಂದು ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಇಂದ್ರನೀಲ್ ಸೇನ್ ಹೇಳಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ 2021ರ ಏಪ್ರಿಲ್–ಮೇನಲ್ಲಿ ನಡೆಯಬೇಕಿದೆ.

‘ಖ್ಯಾತ ಹಿನ್ನೆಲೆ ಗಾಯಕ ಮನ್ನಾ ಡೇ ಅವರ ಜಯಂತಿಯಂದು ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರಮುಖ ಬಿಜೆಪಿ ನಾಯಕರೊಬ್ಬರು ಕಿಶೋರ್ ಕುಮಾರ್ ಅವರ ಹಾಡನ್ನು ಟ್ವೀಟ್ ಮಾಡಿದ್ದಾರೆ’ ಎಂದು ಸೇನ್ ಹೆಸರು ಉಲ್ಲೇಖಿಸದೆಯೇ ಟೀಕಿಸಿದ್ದಾರೆ.

‘ಅದೇ ಬಿಜೆಪಿ ನಾಯಕ ಕಿಶೋರ್ ಕುಮಾರ್ ಅವರ ಜನ್ಮದಿನದಂದು ಮೊಹಮ್ಮದ್ ರಫಿ ಅವರ ಹಾಡು ಹಂಚಿಕೊಂಡಿದ್ದರು. ಇದು ಬಂಗಾಳವನ್ನು ಹೆಮ್ಮೆಪಡುವಂತೆ ಮಾಡಿದವರ ಕುರಿತಾದ ಅವರ (ಬಿಜೆಪಿ ನಾಯಕ) ಜ್ಞಾನದ ಮಟ್ಟವನ್ನು ಸೂಚಿಸುತ್ತದೆ’ ಎಂದೂ ಅವರು ಹೇಳಿದ್ದಾರೆ.

‘ಇಂಥ ಬಿಜೆಪಿ ನಾಯಕರು ಅನೇಕ ಕಡೆಗಳಲ್ಲಿ ಗಬ್ಬರ್ ಸಿಂಗ್‌ನಂತೆ ಡಯಲಾಗ್ ಹೇಳುವುದಲ್ಲದೆ, ಸಹೋದರರ ನಡುವೆ ಜಗಳ ತಂದಿಡುತ್ತಾರೆ’ ಎಂದೂ ಸೇನ್ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.