ADVERTISEMENT

ರಾಜಭವನದ ಒಎಸ್‌ಡಿಗೆ ಸಂಬಂಧಿಕರನ್ನು ನೇಮಿಸಿಲ್ಲ: ಜಗದೀಪ್‌ ಧನ್‌ಕರ್‌ ಸ್ಪಷ್ಟನೆ

ಪಿಟಿಐ
Published 7 ಜೂನ್ 2021, 7:29 IST
Last Updated 7 ಜೂನ್ 2021, 7:29 IST
ಜಗದೀಪ್‌ ಧನ್‌ಕರ್‌
ಜಗದೀಪ್‌ ಧನ್‌ಕರ್‌   

ಕೋಲ್ಕತ್ತ: ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್‌ ಧನ್‌ಕರ್‌ ಅವರು ತಮ್ಮ ಸಂಬಂಧಿಕರು ಮತ್ತು ಪರಿಚಯಸ್ಥರನ್ನು ರಾಜಭವನದ ವಿಶೇಷ ಕರ್ತವ್ಯ ಅಧಿಕಾರಿಗಳಾಗಿ(ಒಎಸ್‌ಡಿ) ನೇಮಿಸಿದ್ದಾರೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಮಾಡಿರುವ ಆರೋಪವನ್ನು ಧನ್‌ಕರ್‌ ತಳ್ಳಿ ಹಾಕಿದ್ದಾರೆ.

‘ಇದು ಸುಳ್ಳು ಸುದ್ದಿ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಇದರಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಈ ರೀತಿ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ರಾಜಭವನದಲ್ಲಿ ವಿಶೇಷ ಕರ್ತವ್ಯದಲ್ಲಿ ನಿರತರಾಗಿರುವ ಅಧಿಕಾರಿಗಳು ನನ್ನ ಸಂಬಂಧಿಕರಲ್ಲ’ ಎಂದು ಅವರು ಹೇಳಿದ್ದಾರೆ.

‘ಒಎಸ್‌ಡಿಗೆ ನೇಮಿಸಲಾಗಿರುವ ಅಧಿಕಾರಿಗಳು ನನ್ನ ಸಂಬಂಧಿಕರು ಎಂದು ಮಹುವಾ ಮೊಹಿತ್ರಾ ಅವರು ದೂರಿದ್ದಾರೆ. ಆದರೆ ಇದು ನಿಜವಲ್ಲ. ಒಎಸ್‌ಡಿಯಲ್ಲಿರುವ ಅಧಿಕಾರಿಗಳು ಮೂರು ವಿವಿಧ ರಾಜ್ಯಗಳು ಮತ್ತು ನಾಲ್ಕು ವಿಭಿನ್ನ ಜಾತಿಗೆ ಸೇರಿದವರು. ಇವರಲ್ಲಿ ಯಾರೊಬ್ಬರೂ ನನ್ನ ಕುಟುಂಬದವರಲ್ಲ. ಈ ನಾಲ್ಕು ಮಂದಿ ನನ್ನ ಜಾತಿ ಅಥವಾ ರಾಜ್ಯಕ್ಕೆ ಸೇರಿದವರಲ್ಲ’ ಎಂದು ಧನಕರ್‌ ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ADVERTISEMENT

‘ನಾನು ಪ್ರತಿಜ್ಞೆಯಂತೆ ಜನರಿಗೆ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ಧೇನೆ. ಇಷ್ಟೇ ಉತ್ಸಾಹದಿಂದ ಮುಂದೆಯೂ ಜನರ ಸೇವೆ ಮಾಡಲಿದ್ದೇನೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಧನಕರ್‌ ಅವರನ್ನು ಅಂಕಲ್‌ ಜೀ ಎಂದು ಕರೆದ ಮಹುವಾ ಅವರು, ‘ಧನಕರ್‌ ಅವರು ತಮ್ಮ ಪರಿಚಯಸ್ಥರು ಮತ್ತು ಸಂಬಂಧಿಕರನ್ನು ರಾಜಭವನದ ಒಎಸ್‌ಡಿಗೆ ನೇಮಕ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇದರೊಂದಿಗೆ ಒಎಸ್‌ಡಿಗೆ ನೇಮಿಸಲಾದ ಸಿಬ್ಬಂದಿಯ ಹೆಸರಿನ ಪಟ್ಟಿಯನ್ನು ಭಾನುವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.