
ರಾಮಪುರಹಾಟ್: ಬಾಂಗ್ಲಾದೇಶಕ್ಕೆ ಸೇರಿದವರೆಂದು ಆ ದೇಶಕ್ಕೆ ಗಡಿಪಾರು ಮಾಡಿ, ಬಳಿಕ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ವಾಪಸು ಕರೆಸಿಕೊಳ್ಳಲಾಗಿದ್ದ ಪಶ್ಚಿಮ ಬಂಗಾಳದ ಮಹಿಳೆಗೆ ಹೆರಿಗೆಯಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.
ಕಳೆದ ಜೂನ್ನಲ್ಲಿ ಸುನಾಲಿ ಖಾತೂನ್, ಇವರ ಗಂಡ ಮತ್ತು ಮಗನನ್ನು ಸೇರಿ ಕುಟುಂಬದ ಐವರನ್ನು ದೆಹಲಿ ಪೊಲೀಸರು ಬಾಂಗ್ಲಾದೇಶಕ್ಕೆ ಕಳುಹಿಸಿದ್ದರು. ಹೆರಿಗೆಯ ಕಾರಣಕ್ಕೆ ಸುನಾಲಿ ಮತ್ತು ಅವರ ಮಗನನ್ನು ಭಾರತಕ್ಕೆ ವಾಪಸು ಕರೆತರುವಂತೆ ಸುಪ್ರೀಂ ಕೋರ್ಟ್ ಡಿ.5ಕ್ಕೆ ಆದೇಶಿಸಿತ್ತು. ಉಳಿದವರನ್ನು ವಾಪಸು ಕರೆಸಿಕೊಳ್ಳಲು ಆದೇಶಿಸುವಂತೆ ಕೋರಿರುವ ಪ್ರಕರಣ ನ್ಯಾಯಾಲಯದಲ್ಲಿದೆ.
‘ಇದು ಅತ್ಯಂತ ಸಂತಸದ ವಿಚಾರ. ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರು ಆಕೆಯನ್ನು ತಪ್ಪಾಗಿ ಮತ್ತು ಬಲವಂತವಾಗಿ ಬಾಂಗ್ಲಾದೇಶಕ್ಕೆ ಕಳುಹಿಸಿದ್ದರು’ ಎಂದು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.