ADVERTISEMENT

ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಹಿಂಸಾಚಾರ: ತನಿಖೆ ಆರಂಭಿಸಿದ ಎನ್‌ಐಎ

ಪಿಟಿಐ
Published 22 ಸೆಪ್ಟೆಂಬರ್ 2020, 11:05 IST
Last Updated 22 ಸೆಪ್ಟೆಂಬರ್ 2020, 11:05 IST
ಡಿ.ಜೆ.ಹಳ್ಳಿಯಲ್ಲಿ ಪ್ರತಿಭಟನಕಾರರ ಆಕ್ರೋಶಕ್ಕೆ ಆಹುತಿಯಾದ ವಾಹನಗಳು (ಸಂಗ್ರಹ ಚಿತ್ರ) –ಪ್ರಜಾವಾಣಿ ಚಿತ್ರ
ಡಿ.ಜೆ.ಹಳ್ಳಿಯಲ್ಲಿ ಪ್ರತಿಭಟನಕಾರರ ಆಕ್ರೋಶಕ್ಕೆ ಆಹುತಿಯಾದ ವಾಹನಗಳು (ಸಂಗ್ರಹ ಚಿತ್ರ) –ಪ್ರಜಾವಾಣಿ ಚಿತ್ರ   

ನವದೆಹಲಿ: ಬೆಂಗಳೂರಿನ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ಆಗಸ್ಟ್‌ನಲ್ಲಿ ನಡೆದ ಹಿಂಸಾಚಾರ ಕುರಿತ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ಕೈಗೆತ್ತಿಕೊಂಡಿದೆ.

ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ), ಬೆಂಕಿ ಹಚ್ಚುವುದು, ಹಿಂಸಾಚಾರ ಮತ್ತು ಸಾರ್ವಜನಿಕ ಆಸ್ತಿ ಹಾನಿಗೆ ಸಂಬಂಧಿಸಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

‘ಐಜಿ ರ‍್ಯಾಂಕಿನ ಅಧಿಕಾರಿ ನೇತೃತ್ವದ ತಂಡವೊಂದನ್ನು ಬೆಂಗಳೂರಿಗೆ ಕಳುಹಿಸಲಾಗಿದೆ’ ಎಂದು ಎನ್‌ಐಎ ವಕ್ತಾರರೊಬ್ಬರು ತಿಳಿಸಿದ್ದಾರೆ.

ADVERTISEMENT

‘ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸಹೋದರಿಯ ಮಗ, ನವೀನ್‌ ಅವರು ಪ್ರವಾದಿ ಮೊಹ್ಮದ್‌ ಕುರಿತ ಅವಹೇಳನಕಾರಿ ಪೋಸ್ಟ್‌ವೊಂದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ, ಗುಂಪೊಂದು ಆಗಸ್ಟ್‌ 11ರ ರಾತ್ರಿ ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸಿತ್ತು. ನಂತರ, ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿತ್ತು’ ಎಂದು ವಕ್ತಾರ ವಿವರಿಸಿದರು.

‘ಎಸ್‌ಡಿಪಿಐನ ರಾಜ್ಯ ಘಟಕದ ಕಾರ್ಯದರ್ಶಿ ಮುಜಾಮಿಲ್‌ ಪಾಷಾ ಸಭೆ ನಡೆಸಿದ್ದರು ಎಂದು ಆರೋಪಿಸಲಾಗಿದೆ. ನಂತರ ಅವರು, ಗುಂಪೊಂದು ಪ್ರಚೋದಿಸಿ, ಹಿಂಸಾಚಾರ ನಡೆಸುವಂತೆ ಪಿಎಫ್‌ಐ ಮತ್ತು ಎಸ್‌ಡಿಪಿಐ ಕಾರ್ಯಕರ್ತರಿಗೆ ನಿರ್ದೇಶನ ನೀಡಿದ್ದರು ಎಂಬ ಆರೋಪವೂ ಇದೆ‘ ಎಂದು ತಿಳಿಸಿದರು.

ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಪೊಲೀಸ್‌ ಠಾಣೆಗಳಲ್ಲಿ ವಿಧ್ವಂಸಕ ಕೃತ್ಯ ಎಸಗಿ, ಆಸ್ತಿ ಹಾನಿಗೊಳಿಸಿದ್ದ ಪ್ರತಿಭಟನಕಾರರು, ಶಾಸಕರ ಮನೆ ಮೇಲೂ ದಾಳಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.