ADVERTISEMENT

ಭಗತ್ ಸಿಂಗ್ ಜನ್ಮದಿನ: ಪಕ್ಷಾತೀತವಾಗಿ ಗೌರವ ನಮನ ಸಲ್ಲಿಸಿದ ರಾಜಕೀಯ ನಾಯಕರು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 7:06 IST
Last Updated 28 ಸೆಪ್ಟೆಂಬರ್ 2021, 7:06 IST
ಭಗತ್ ಸಿಂಗ್
ಭಗತ್ ಸಿಂಗ್   

ಬೆಂಗಳೂರು: ಭಗತ್ ಸಿಂಗ್ ಅವರ ಜನ್ಮ ದಿನವಾದ ಇಂದು (ಸೆ.28) ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿವಿಧ ರಾಜಕೀಯ ಪಕ್ಷಗಳ ನಾಯಕರು ಗೌರವ ನಮನ ಸಲ್ಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲರಾದ ತಾವರ್‌ಚಂದ್‌ ಗೆಹ್ಲೋಟ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌, ಒಡಿಶಾ ಮುಖ್ಯಮಂತ್ರಿ ನವೀನ್ ಕುಮಾರ್‌ ಪಟ್ನಾಯಕ್‌ ಸೇರಿದಂತೆ ಹಲವು ಗಣ್ಯರು ಗೌರಮ ನಮನ ಸಲ್ಲಿಸಿದ್ದಾರೆ.

‘ಭಗತ್‌ಸಿಂಗ್ ಅವರ ಧೈರ್ಯ, ತ್ಯಾಗದ ಮನೋಭಾವ ದೇಶದ ಅಸಂಖ್ಯಾತ ಜನರಲ್ಲಿ ದೇಶಭಕ್ತಿಯ ಕಿಡಿಯನ್ನು ಹೊತ್ತಿಸಿತ್ತು. ಇಂಥ ಅಪ್ರತಿಮ ಹೋರಾಟಗಾರ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನೆಲೆಸಿದ್ದಾರೆ. ನಾನು ಅವರಿಗೆ ತಲೆಬಾಗುತ್ತೇನೆ ಮತ್ತು ಅವರ ಉದಾತ್ತ ಆದರ್ಶಗಳನ್ನು ಸ್ಮರಿಸುತ್ತೇನೆ‘ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ADVERTISEMENT

'ಮಹಾನ ಕ್ರಾಂತಿಕಾರಿ, ಅಪ್ರತಿಮ ದೇಶಪ್ರೇಮಿ ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಭಗತ್ ಸಿಂಗ್‌ ಅವರ ಜನ್ಮದಿನದಂದು ನನ್ನ ಗೌರವಪೂರ್ಣ ಪ್ರಣಾಮಗಳು. ಮಹಾನ್ ದೇಶಭಕ್ತರಾಗಿದ್ದ ಅವರ ಧೈರ್ಯ ಹಾಗೂ ದಿಟ್ಟ ನಿಲುವುಗಳು ನಮಗೆಲ್ಲರಿಗೂ ಮಾದರಿ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂ ಮಾಡಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರಾದ ಶಹೀದ್-ಇ-ಅಜಮ್ ಭಗತ್ ಸಿಂಗ್ ಅವರ 114 ನೇ ಜನ್ಮದಿನದ ಪ್ರಯುಕ್ತ ನಮನಗಳನ್ನು ಸಲ್ಲಿಸುತ್ತೇನೆ. ಅವರು ದೇಶಭಕ್ತಿ ಮತ್ತು ಧೈರ್ಯದ ವಿಶಿಷ್ಟ ಸಂಕೇತವಾಗಿದ್ದರು ಎಂದು ರಾಜ್ಯಪಾಲ ತಾವರ್‌ಚಂದ್‌ ಗೆಹ್ಲೋಟ್‌ ಟ್ವೀಟ್‌ ಮಾಡಿದ್ದಾರೆ.

ದೇಶಕ್ಕಾಗಿ ಪ್ರಾಣವನ್ನೆ ಬಲಿದಾನ ಮಾಡಿದ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ಸೇನಾನಿ ಭಗತ್‌ಸಿಂಗ್ ಹುಟ್ಟುಹಬ್ಬದಂದು ಅವರನ್ನು ಗೌರವದಿಂದ ನೆನೆಯುವೆ. ಅವರ ಜೀವನಾದರ್ಶಗಳು ನಮಗೆಲ್ಲ ಪ್ರೇರಣೆಯಾಗಲಿ ಎಂದು ಹಾರೈಸುವೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಟ್ವೀಟ್‌ ಮಾಡಿದ್ದಾರೆ.

'ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಹೋರಾಟಗಾರರು, ಭಾರತಾಂಬೆಯ ಹೆಮ್ಮೆಯ ಪುತ್ರರೂ ಆದ ಭಗತ್ ಸಿಂಗ್ ಅವರ ಜನ್ಮದಿನದಂದು ಆ ಮಹಾನ್ ಚೇತನಕ್ಕೆ ನನ್ನ ಪ್ರಣಾಮಗಳು. ಅವರ ಕೆಚ್ಚು, ಅಪ್ರತಿಮ ದೇಶಭಕ್ತಿ ನಮಗೆಲ್ಲರಿಗೂ ಪ್ರೇರಣೆ' ಎಂದು ಜೆಡಿಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಕೂ ಮಾಡಿದ್ದಾರೆ

ಭಗತ್ ಸಿಂಗ್ ಹುಟ್ಟಿದ್ದು 1907, ಸೆ.28 ರಂದು ಈಗ ಪಾಕಿಸ್ತಾನದಲ್ಲಿರು ಪಂಜಾಬ್ ಪ್ರಾಂತ್ಯದಲ್ಲಿ. ಮಾರ್ಕ್ಸ್ ವಾದಿ, ಸಮಾಜವಾದಿ, ಕ್ರಾಂತಿಕಾರಿಯಾಗಿದ್ದ ಭಗತ್ ತಮ್ಮ 23ನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಜೀವ ಅರ್ಪಿಸಿದ್ದರು.

ಭಗತ್‌ಸಿಂಗ್ ಅವರಲ್ಲಿದ್ದ ತ್ಯಾಗ ಮತ್ತು ಆದರ್ಶಗಳಿಂದಾಗಿ ಅವರೊಬ್ಬ ಜನಪ್ರಿಯ ನಾಯಕರಾಗಿದ್ದರು. ಈ ಆದರ್ಶಗಳು ಅನೇಕರಿಗೆ ಸ್ಫೂರ್ತಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.