ಇಂಧೋರ್: ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರದಲ್ಲೇ ಮುಸ್ಲಿಮರ ಟೋಪಿಯನ್ನು ಧರಿಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದರು. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯು ಇಂತಹ ಒತ್ತಡವನ್ನು ಸೃಷ್ಟಿಸುತ್ತಿದೆ ಎಂದರು.
ಪಾದಯಾತ್ರೆ ಆಯೋಜನೆಯ ನೇತೃತ್ವ ವಹಿಸಿರುವ ದಿಗ್ವಿಜಯ್ ಸಿಂಗ್ ಅವರು ಮಂಗಳವಾರ ಇಂಧೋರ್ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.
ಈ ದಿನಗಳಲ್ಲಿ ಬಿಜೆಪಿ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡಿದೆ. ಭಾರತ್ ಜೋಡೊ ಯಾತ್ರೆ ಆರಂಭಗೊಂಡು ಒಂದು ತಿಂಗಳಾಗುವ ಮೊದಲೇ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮದರಸ ಮತ್ತು ಮಸೀದಿಗಳಿಗೆ ಭೇಟಿ ನೀಡಲು ಆರಂಭಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಪ್ರಧಾನಿ ಮೋದಿ ಅವರೂ ಟೋಪಿ ಧರಿಸುತ್ತಾರೆ ಎಂದರು.
ಪ್ರಧಾನಿ ಮೋದಿ ಅವರು ಸೌದಿ ಅರೇಬಿಯಾ ಮತ್ತು ಇತರ ರಾಷ್ಟ್ರಗಳಲ್ಲಿ ಮುಸ್ಲಿಂ 'ಟೋಪಿ' ಧರಿಸುತ್ತಾರೆ. ಆದರೆ ಭಾರತಕ್ಕೆ ಹಿಂತಿರುಗಿದ ಬಳಿಕ ಅದರಿಂದ ದೂರ ಉಳಿಯುತ್ತಾರೆ ಎಂದು ಇದೇ ಸಂದರ್ಭ ದೂರಿದರು.
2011ರ ಸೆಪ್ಟೆಂಬರ್ನಲ್ಲಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ, ಅಹಮದಾಬಾದ್ನಲ್ಲಿ ಸದ್ಭಾವನಾ ಉಪವಾಸ ನಡೆಸುತ್ತಿದ್ದಾಗ ಮುಸ್ಲಿಂ ಮುಖಂಡರು ನೀಡಿದ ಟೋಪಿಯನ್ನು ಧರಿಸಲು ನಿರಾಕರಿಸಿದ್ದರು.
ಭಾಗವತ್ ಅವರು ಸೆಪ್ಟೆಂಬರ್ ತಿಂಗಳಲ್ಲಿ ದೆಹಲಿಯ ಮಸೀದಿ ಮತ್ತು ಮದರಸಕ್ಕೆ ಭೇಟಿ ನೀಡಿದ್ದರು. ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯಸ್ಥ ಉಮರ್ ಅಹ್ಮದ್ ಇಲ್ಯಾಸಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಬಿಜೆಪಿ ಆಡಳಿತದಿಂದಾಗಿ ರಾಷ್ಟ್ರದ ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಈ ಯಾತ್ರೆಯು ಅಂತಿಮವಾಗಿ ಶ್ರೀನಗರ ತಲುಪಿದಾಗ ಏನೇನು ಆಗುತ್ತದೆ ಎಂಬುದನ್ನು ನೀವು ನೋಡಬಹುದು ಎಂದು ದಿಗ್ವಿಜಯ್ ಸಿಂಗ್ ಯಾತ್ರೆ ಬಗ್ಗೆ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.