ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮೇಲೆ ಅಪರಿಚಿತನೊಬ್ಬ ದಾಳಿ ನಡೆಸಿದ ಘಟನೆ ಭಾನುವಾರ ನಡೆದಿದೆ. ಭಕ್ತಿಯಾರ್ಪುರದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳಿಗೆ ನಿತೀಶ್ ಅವರು ಪುಷ್ಪನಮನ ಸಲ್ಲಿಸುವ ಕಾರ್ಯಕ್ರಮದ ವೇಳೆ ಈ ಹಲ್ಲೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
20ರಿಂದ 30 ವರ್ಷದೊಳಗಿನ ಯುವಕನೊಬ್ಬ ನಿತೀಶ್ ಅವರ ಹಿಂಬದಿಯಿಂದ ಬಂದು ಅವರೆದುರು ನಿಂತುಕೊಳ್ಳುತ್ತಿರುವ ದೃಶ್ಯವು ಸಿ.ಸಿ.ಟಿ.ವಿ ಕ್ಯಾಮರಾದಲ್ಲಿ ದಾಖಲಾಗಿದೆ. ತಕ್ಷಣವೇ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿಗಳ ಭದ್ರತಾ ಸಿಬ್ಬಂದಿ, ವ್ಯಕ್ತಿಯನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದರು.
ಮುಕೇಶ್ ಸಹಾನಿ ವಜಾ: ಬಿಹಾರದ ಮೀನುಗಾರಿಕಾ ಸಚಿವ ಮುಕೇಶ್ ಸಹಾನಿ ಅವರನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಚಿವ ಸಂಪುಟದಿಂದ ವಜಾ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಹಾನಿ ಅವರು ವಿಕಾಸಶೀಲ ಇನ್ಸಾನ್ ಪಕ್ಷದ ಸ್ಥಾಪಕರು. ಅವರ ಪಕ್ಷವು ಎನ್ಡಿಎ ಮಿತ್ರಪಕ್ಷವಾಗಿ ಉಳಿದಿಲ್ಲ ಎಂಬುದಾಗಿ ಬಿಜೆಪಿ ತಿಳಿಸಿದ್ದ ಕಾರಣ, ನಿತೀಶ್ ಅವರು ಈ ಕ್ರಮ ತೆಗೆದುಕೊಂಡಿದ್ದು, ಈ ಸಂಬಂಧ ರಾಜ್ಯಪಾಲರಿಗೆ ಸದ್ಯದಲ್ಲೇ ಲಿಖಿತ ಮನವಿ ಸಲ್ಲಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಬೆಂಬಲದೊಂದಿಗೆ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದ ಸಹಾನಿ, ನಿತೀಶ್ ನೇತೃತ್ವದ ಸಂಪುಟ ಸೇರ್ಪಡೆಯಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.