ADVERTISEMENT

108 ವರ್ಷಗಳ ಹಿಂದಿನ ಭೂ ವ್ಯಾಜ್ಯ ಬಗೆಹರಿಸಿದ ಬಿಹಾರ ಕೋರ್ಟ್‌

ಬ್ರಿಟಿಷ್‌ ಆಳ್ವಿಕೆ ಕಾಲದ ಪ್ರಕರಣ; ನಾಲ್ಕು ತಲೆಮಾರುಗಳಿಂದ ನ್ಯಾಯಕ್ಕಾಗಿ ಹೋರಾಟ

​ಪ್ರಜಾವಾಣಿ ವಾರ್ತೆ
Published 20 ಮೇ 2022, 13:45 IST
Last Updated 20 ಮೇ 2022, 13:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಟ್ನಾ:ಬಿಹಾರದ ಭೋಜ್‌ಪುರ ಜಿಲ್ಲೆಯ ನ್ಯಾಯಾಲಯವು 108 ವರ್ಷಗಳ ಹಿಂದಿನ ಮೂರು ಎಕರೆ ಜಮೀನಿನ ಸಿವಿಲ್ ವ್ಯಾಜ್ಯವನ್ನು ಬಗೆಹರಿಸಿ ಗಮನ ಸೆಳೆದಿದೆ.

ಈ ಜಮೀನಿಗೆ ಸಂಬಂಧಿಸಿ, ಅತುಲ್ ಸಿಂಗ್ ಅವರ ಮುತ್ತಜ್ಜ ದರ್ಬಾರಿ ಸಿಂಗ್ 1914ರಲ್ಲಿ ಪ್ರಾರಂಭಿಸಿದ ಕಾನೂನು ಹೋರಾಟದಲ್ಲಿಅತುಲ್ ಸಿಂಗ್ ಪರವಾಗಿಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಶ್ವೇತಾ ಸಿಂಗ್ ಇತ್ತೀಚೆಗೆ ತೀರ್ಪು ನೀಡಿದ್ದಾರೆ.

‘ಪ್ರಕರಣದ ದಾಖಲೆಗಳನ್ನು ಜಿರಲೆಗಳು ತಿಂದಿದ್ದವು. ಮೂಲ ದಾಖಲೆಗಳನ್ನು ಶೋಧಿಸಲು ಶ್ರಮಪಡಬೇಕಾಯಿತು. ಮಾರ್ಚ್ 11ರಂದು ನಮ್ಮ ಪರ ತೀರ್ಪು ಬಂದಿತು. ನ್ಯಾಯಾಧೀಶರು ಸಹ ಅವರ ಪರಿಶ್ರಮಕ್ಕಾಗಿ ಪ್ರಶಂಸಾರ್ಹರು’ ಎಂದು ಫಿರ್ಯಾದಿ ಪರ ವಕೀಲ ಸತೇಂದ್ರ ಸಿಂಗ್ ತಿಳಿಸಿದರು.

ADVERTISEMENT

‘ಅತುಲ್ ಸಿಂಗ್ ತನ್ನ ಭೂಮಿ ಬಿಡಿಸಿಕೊಳ್ಳಲು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಮೊರೆ ಹೋಗಬಹುದೆಂದು ನ್ಯಾಯಾಧೀಶರು ಆದೇಶಿಸಿದ್ದಾರೆ’ ಎಂದು ಅವರು ತಿಳಿಸಿದರು.

ಕೋಯಿಲ್ವಾರ್ ನಗರ ಪಂಚಾಯಿತಿ ವ್ಯಾಪ್ತಿಯ ಈ ಭೂಮಿಯನ್ನು ನಾಥುನಿ ಖಾನ್ ಎಂಬುವವರ ಕುಟುಂಬದವರಿಂದ ದರ್ಬಾರಿ ಸಿಂಗ್ ಖರೀದಿಸಿದ್ದರು. ಖಾನ್ ಅವರು 1911ರಲ್ಲಿ ನಿಧನರಾದರು. ಅವರ ಆಸ್ತಿಯ ಹಕ್ಕುಗಳಿಗಾಗಿ ಅವಲಂಬಿತರ ನಡುವೆ ಜಗಳ ನಡೆಯುತ್ತಿತ್ತು.ಬ್ರಿಟಿಷ್ ವಸಾಹತುಶಾಹಿ ಸರ್ಕಾರದಲ್ಲಿಈ ಭೂಮಿ ಮುಟ್ಟುಗೋಲಿಗೆ ಒಳಪಟ್ಟು, ಒಂಬತ್ತು ಎಕರೆ ಎಸ್ಟೇಟ್‌ನ ಭಾಗವಾಗಿತ್ತು. ಇದರ ಮಾಲೀಕತ್ವದ ಹಕ್ಕಿನ ವಿಚಾರ ಕೊರ್ಟ್‌ ಮೆಟ್ಟಿಲೇರಿತ್ತು.

‘ನಿಜಕ್ಕೂ ಇದೊಂದು ಮನಸಿಗೆ ಮುದ ನೀಡುವ ಪ್ರಕರಣ, ನಾಥುನಿ ಖಾನ್ ಅವರ ಕುಟುಂಬದವರೆಲ್ಲರೂ ದೇಶ ವಿಭಜನೆಯ ನಂತರ ಪಾಕಿಸ್ತಾನಕ್ಕೆ ವಲಸೆ ಹೋದರು. ನನ್ನ ಕಕ್ಷಿದಾರರು ನಾಲ್ಕು ತಲೆಮಾರುಗಳಿಂದ ನ್ಯಾಯಕ್ಕಾಗಿ ಹೋರಾಡಿದ್ದಾರೆ. ನನ್ನ ಅಜ್ಜ ಶಿವವ್ರತ್ ನಾರಾಯಣ್ ಸಿಂಗ್ ಮೊದಲು ಈ ವ್ಯಾಜ್ಯದ ವಕಾಲತ್ತು ವಹಿಸಿದ್ದರು. ಅವರ ಮರಣದ ನಂತರ ನನ್ನ ತಂದೆ ಬದ್ರಿ ನಾರಾಯಣ್ ಸಿಂಗ್ ಮುಂದುವರಿಸಿದರು. ಅವರ ತರುವಾಯ ನಾನು ಮುನ್ನಡೆಸಿದೆ’ಎಂದು ಸತೇಂದ್ರ ಸಿಂಗ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.