ಪಟ್ನಾ: ಬಿಹಾರದಲ್ಲಿ ಇತ್ತೀಚೆಗಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಕೆಲಸವಿಲ್ಲದೆ ಖಾಲಿ ಕೂತಿರುವ ಕೃಷಿ ಕಾರ್ಮಿಕರೂ ಕಾರಣ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ. ಇದೀಗ ವಿವಾದಕ್ಕೀಡಾಗಿದೆ.
ಅಪರಾಧ ಪ್ರಕರಣಗಳ ಹೆಚ್ಚಳ ಕುರಿತಂತೆ ಮಾಧ್ಯಮಗಳೊಂದಿಗೆ ಎಡಿಜಿ (ಕಾನೂನು–ಸುವ್ಯವಸ್ಥೆ) ಕುಂದನ್ ಕೃಷ್ಣನ್ ಮಾತನಾಡಿದರು. ಈ ವೇಳೆ ‘ ಬಿಹಾರವು ಋತು ಆಧಾರಿತ 2 ಪ್ರಮುಖ ಬೆಳೆಗಳನ್ನಷ್ಟೇ ಒಳಗೊಂಡಿದೆ. ಏಪ್ರಿಲ್ನಿಂದ ಜೂನ್ವರೆಗೆ ಬಹುತೇಕ ಕೃಷಿ ಕಾರ್ಮಿಕರಿಗೆ ಕೆಲಸ ಇರುವುದಿಲ್ಲ. ಹೀಗಾಗಿ ಈ ಅವಧಿಯಲ್ಲಿ ಭೂ ವಿವಾದ ಸಂಬಂಧಿಸಿದ ಸಂಘರ್ಷಗಳು ಹೆಚ್ಚಿರುತ್ತವೆ’ ಎಂದಿದ್ದಾರೆ.
ಅಲ್ಲದೇ, ಹೀಗೆ ಕೆಲಸವಿಲ್ಲದೇ ಇರುವವರ ಪೈಕಿ ಕೆಲವರು ಅದರಲ್ಲೂ ಯುವಕರು ಬೇಗ ಹಣಗಳಿಸುವ ಆಮಿಷಕ್ಕೆ ಒಳಗಾಗಿ ಹತ್ಯೆಗೆ ಸುಪಾರಿಯನ್ನೂ ಪಡೆದಿರುತ್ತಾರೆ‘ ಎಂದೂ ಕುಂದನ್ ಹೇಳಿದ್ದಾರೆ. ಕೃಷಿ ಕಾರ್ಮಿಕರ ಬಗ್ಗೆಗಿನ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಕುಂದನ್ ಸ್ಪಷ್ಟನೆ ಕೂಡ ನೀಡಿದ್ದು, ‘ನಾನು ನೀಡಿದ ಹೇಳಿಕೆಗಳೆಲ್ಲವೂ ದತ್ತಾಂಶ ಆಧರಿತವಾಗಿವೆ. ಬೇಕಿದ್ದರೆ ಅಪರಾಧ ಪ್ರಕರಣಗಳು ಹೇಗೆ ಹೆಚ್ಚಿವೆ ಎಂಬುದನ್ನು ಸಂಖ್ಯೆ ಸಮೇತ ಹೇಳುತ್ತೇನೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.