ADVERTISEMENT

ಬಿಹಾರ: ಅಧಿಕಾರಿಗಳಿಗೆ ಮಾಹಿತಿ ನೀಡಿದ ವ್ಯಕ್ತಿಯನ್ನೇ ಕೊಂದ ಕೊರೊನಾ ಶಂಕಿತರು

ಏಜೆನ್ಸೀಸ್
Published 31 ಮಾರ್ಚ್ 2020, 10:06 IST
Last Updated 31 ಮಾರ್ಚ್ 2020, 10:06 IST
   

ಪಟ್ನಾ: ಅಧಿಕಾರಿಗಳಿಗೆ ತಮ್ಮ ಬಗ್ಗೆ ಮಾಹಿತಿ ನೀಡಿದಾತನನ್ನೇ ಕೊರೊನಾ ಶಂಕಿತರಿಬ್ಬರು ಕೊಲೆ ಮಾಡಿದ ಘಟನೆ ಉತ್ತರ ಬಿಹಾರದ ಸೀತಾಮರ್ಹಿ ಎಂಬಲ್ಲಿ ನಡೆದಿದೆ.

ಸುಧೀರ್ ಮಹತೊ ಮತ್ತು ಮುನ್ನಾ ಮಹತೊ ಎಂಬುವವರೇ ಈ ಕೃತ್ಯ ಎಸಗಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಬ್ಬರೂ 10 ದಿನಗಳ ಹಿಂದೆ ಮುಂಬೈನಿಂದ ವಾಪಸಾಗಿದ್ದರು. ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬೇರೆ ಊರಿನಿಂದ ಬಂದ ಇವರ ಬಗ್ಗೆ ಬಬ್ಲು ಕುಮಾರ್ ಎಂಬ 20 ವರ್ಷದ ಯುವಕ ಜಿಲ್ಲಾ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಇದನ್ನು ಆಧಿರಿಸಿ ಊರಿಗೆ ಬಂದ ವೈದ್ಯರ ತಂಡ ಸುಧೀರ್ ಮಹತೊ ಮತ್ತು ಮುನ್ನಾ ಮಹತೊ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು. ಮೂರು ದಿನಗಳ ಬಳಿಕ ಇಬ್ಬರಿಗೂ ಕೊರೊನಾ ತಗುಲಿಲ್ಲ ಎಂದು ವರದಿ ಬಂದಿತ್ತು.

ADVERTISEMENT

ಆದರೆ, ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ ವಿಚಾರದಲ್ಲಿ ದ್ವೇಷ ಉಂಟಾಗಿತ್ತು. ಭಾನುವಾರ ಬಬ್ಲು ಕುಮಾರ್ ಒಬ್ಬನೇ ಇರುವುದನ್ನು ನೋಡಿದ ಆರೋಪಿಗಳು ಆತನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ.

ಮೃತ ವ್ಯಕ್ತಿಯ ತಂದೆ ವಿನೋದ್ ಸಿಂಗ್ ಎಂಬುವವರು ನೀಡಿರುವ ದೂರಿನ ಆಧಾರದಲ್ಲಿ ಎಫ್‌ಐಆರ್‌ ದಾಖಲಿಸಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.