ಜೆಡಿಯುವಿನ ನಿತೀಶ್ ಕುಮಾರ್ ಅವರು ಈ ಬಾರಿಯೂ ಬಿಹಾರದ ಮುಖ್ಯಮಂತ್ರಿಯಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಎನ್ಡಿಯ ಮೈತ್ರಿಕೂಟದ ಪಕ್ಷವಾದ ಬಿಜೆಪಿ ಸಹ, ‘ಜೆಡಿಯು ಎಷ್ಟೇ ಸ್ಥಾನಗಳನ್ನು ಗೆದ್ದರೂ, ನಿತೀಶ್ ಅವರೇ ಮುಖ್ಯಮಂತ್ರಿಯಾಗುತ್ತಾರೆ’ ಎಂದು ಘೋಷಿಸಿತ್ತು. ಆದರೆ ಫಲಿತಾಂಶದ ದಿನ ಬಿಹಾರ ಬಿಜೆಪಿಯ ರಾಜ್ಯ ನಾಯಕರು ಇದಕ್ಕೆ ವ್ಯತಿರಿಕ್ತವಾದ ಮಾತುಗಳನ್ನು ಆಡಿದ್ದಾರೆ.
ಸಂಜೆ 9.50ರವರೆಗಿನ ಫಲಿತಾಂಶದಲ್ಲಿ ಜೆಡಿಯು ಕೇವಲ 43 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. ಶೇ 15.3ರಷ್ಟು ಮತಗಳನ್ನು ಮಾತ್ರ ಪಡೆದಿತ್ತು. ‘ಈವರೆಗಿನ ಫಲಿತಾಂಶವನ್ನು ಗಮನಿಸಿದರೆ, ‘ಬ್ರ್ಯಾಂಡ್ ನಿತೀಶ್’ಗೆ ಯಾವುದೇ ಧಕ್ಕೆಯಾಗಿಲ್ಲ. ಆದರೆ, ಆಡಳಿತ ವಿರೋಧಿ ಅಲೆ ಕೆಲಸ ಮಾಡಿರುವುದು ಎದ್ದು ಕಾಣುತ್ತಿದೆ’ ಎಂದು ಜೆಡಿಯುನ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.
ಬಿಹಾರ ಬಿಜೆಪಿಯ ಹಿರಿಯ ಮುಖಂಡ ಕೈಲಾಶ್ ವಿಜಯವರ್ಗೀಯ ಅವರು, ‘ಫಲಿತಾಂಶದ ಸ್ಪಷ್ಟ ಚಿತ್ರಣ ದೊರೆತ ನಂತರ ಸರ್ಕಾರ ರಚನೆಯ ಬಗ್ಗೆ ಯೋಚಿಸುತ್ತೇವೆ. ಸರ್ಕಾರದ ನಾಯಕತ್ವದ ಬಗ್ಗೆಯೂ ಯೋಚನೆ ಮಾಡುತ್ತೇವೆ’ ಎಂದು ಹೇಳಿದ್ದಾರೆ. ನಿತೀಶ್ ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಚುನಾವಣೆ ವೇಳೆ ಹೇಳಿದ್ದ ಮಾತನ್ನು ಬಿಜೆಪಿ ಉಳಿಸಿಕೊಳ್ಳುತ್ತದೆಯೇ ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿದೆ.
ಈಗೊಂದಲಗಳಿಗೆ ತೆರೆ ಎಳೆಯಲು ಬಿಜೆಪಿ ಯತ್ನಿಸಿದೆ. ‘ಈ ಹಿಂದೆ ಘೋಷಿಸಿದ್ದಂತೆ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ’ ಎಂದು ಬಿಹಾರ ಬಿಜೆಪಿ ಅಧ್ಯಕ್ಷ ಸಂಜಯ್ ಜೈಸ್ವಾಲ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.