ನವದೆಹಲಿ: ಮತದಾನ ಮುಗಿಯುವುದಕ್ಕೂ 48 ಗಂಟೆಗಳ ಮುನ್ನ (ಮೌನ ಅವಧಿ) ಭಾರಿ ಸಂಖ್ಯೆಯಲ್ಲಿ ಎಸ್ಎಂಎಸ್ ಮತ್ತು ಆಡಿಯೊ ಸಂದೇಶಗಳನ್ನು ರವಾನಿಸುವುದನ್ನು ಕೇಂದ್ರ ಚುನಾವಣಾ ಆಯೋಗ ನಿಷೇಧಿಸಿದೆ.
ಬಿಹಾರ ವಿಧಾನಸಭೆಗೆ ನವೆಂಬರ್ 6ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಅದಕ್ಕೆ ಪೂರಕವಾಗಿ ಆಯೋಗ ಅಕ್ಟೋಬರ್ 9ರಂದು ಈ ಸೂಚನೆ ನೀಡಿದೆ.
ಈ ಅವಧಿಯಲ್ಲಿ ಟಿ.ವಿ, ಕೇಬಲ್ ನೆಟ್ವರ್ಕ್ಗಳು, ರೇಡಿಯೊ, ಚಿತ್ರ ಮಂದಿರಗಳಲ್ಲಿ ಯಾವುದೇ ರೀತಿಯ ಚುನಾವಣಾ ವಿಷಯ ಕುರಿತು ರಾಜಕೀಯ ಜಾಹೀರಾತುಗಳನ್ನು ಪ್ರದರ್ಶಿಸುವಂತಿಲ್ಲ. ಅಂತೆಯೇ ಭಾರಿ ಸಂಖ್ಯೆಯಲ್ಲಿ ಎಸ್ಎಂಎಸ್ಗಳು, ಧ್ವನಿ ಸಂದೇಶಗಳನ್ನು ಕಳುಹಿಸುವಂತಿಲ್ಲ. ಅಲ್ಲದೆ ಯಾವುದೇ ಮತಗಟ್ಟೆಯಲ್ಲಿ ಆಡಿಯೊ, ವಿಡಿಯೊ ದೃಶ್ಯಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ ಎಂದು ಆಯೋಗ ತಿಳಿಸಿದೆ.
ಎಲ್ಲ ನೋಂದಾಯಿತ ಮತ್ತು ರಾಷ್ಟ್ರೀಯ, ರಾಜ್ಯ ರಾಜಕೀಯ ಪಕ್ಷಗಳು ಹಾಗೂ ಪ್ರತಿ ಅಭ್ಯರ್ಥಿಯು ತಾನು ಪ್ರಕಟಿಸುವ ಜಾಹೀರಾತುಗಳಿಗೆ ಸಂಬಂಧಿದಂತೆ ಪೂರ್ವಾನುಮತಿ ಪಡೆಯಲು ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿಗೆ (ಎಂಸಿಎಂಸಿ) ಅರ್ಜಿ ಸಲ್ಲಿಸಬೇಕು ಎಂದು ಆಯೋಗ ಮಂಗಳವಾರ ಹೊರಡಿಸಿರುವ ಪ್ರಕಣೆಯಲ್ಲಿ ತಿಳಿಸಿದೆ.
ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ ಜೆಡಿಯು ಸಂಸದ
ಪಟ್ನಾ (ಪಿಟಿಐ): ಬಿಹಾರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ತಮ್ಮೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಭಾಗಲ್ಪುರದ ಜೆಡಿಯು ಸಂಸದ ಅಜಯ್ ಕುಮಾರ್ ಮಂಡಲ್ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಬಯಸಿರುವುದಾಗಿ ಹೇಳಿದ್ದಾರೆ. ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಮಂಡಲ್ ‘ನಾನು ಬಾಗಲ್ಪುರದ ಸಂಸದ. ಆದರೆ ಪಕ್ಷವು ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳ ಆಯ್ಕೆಗೆ ನನ್ನ ಸಲಹೆಯನ್ನು ಪಡೆದಿಲ್ಲ. ಹೀಗಿರುವಾಗ ಸಂಸದನಾಗಿ ಮುಂದುವರಿಯುವುದರಲ್ಲಿ ಏನು ಅರ್ಥವಿದೆ’ ಎಂದು ಅವರು ಕಿಡಿಕಾರಿದ್ದಾರೆ. ಆದರೆ ಈ ಕುರಿತು ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.