ADVERTISEMENT

ನಾನಾ ಪಟೋಲೆ, ಸುಪ್ರಿಯಾ ಸುಳೆ ವಿರುದ್ಧ ಬಿಟ್‌ಕಾಯಿನ್‌ ಅಕ್ರಮದ ಆರೋಪ

ಮಾಜಿ ಐಪಿಎಸ್‌ ಅಧಿಕಾರಿ ರವೀಂದ್ರನಾಥ ಪಾಟೀಲ್‌ ಅವರಿಂದ ಚುನಾವಣಾ ಆಯೋಗಕ್ಕೆ ದೂರು

ಪಿಟಿಐ
Published 20 ನವೆಂಬರ್ 2024, 19:35 IST
Last Updated 20 ನವೆಂಬರ್ 2024, 19:35 IST
ಸುಪ್ರಿಯಾ ಸುಳೆ
ಸುಪ್ರಿಯಾ ಸುಳೆ   

ಪುಣೆ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮತದಾನದ ನಡುವೆಯೇ, ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ನಾನಾ ಪಟೋಲೆ ಮತ್ತು ಎನ್‌ಸಿಪಿ (ಶರದ್‌ ಪವಾರ್ ಬಣ) ನಾಯಕಿ ಸುಪ್ರಿಯಾ ಸುಳೆ ಅವರ ವಿರುದ್ಧ ಮಾಜಿ ಐಪಿಎಸ್‌ ಅಧಿಕಾರಿ ರವೀಂದ್ರನಾಥ್‌ ಪಾಟೀಲ್‌ ಗಂಭೀರ ಆರೋಪ ಮಾಡಿದ್ದಾರೆ.

‘ಪಟೋಲೆ ಮತ್ತು ಸುಳೆ ಸೇರಿದಂತೆ ವಿರೋಧ ಪಕ್ಷಗಳ ಕೆಲವು ನಾಯಕರ ಸಂಭಾಷಣೆ ಎನ್ನಲಾದ ಧ್ವನಿ ಮು‌ದ್ರಿಕೆಗಳು ನನ್ನ ಬಳಿ ಇವೆ. ಅವುಗಳಲ್ಲಿ ಚುನಾವಣಾ ಪ್ರಚಾರಕ್ಕಾಗಿ ಬಿಟ್‌ಕಾಯಿನ್‌ಗಳನ್ನು ನಗದಾಗಿ ಪರಿವರ್ತಿಸುವಂತೆ ಮನವಿ ಮಾಡಿರುವ ಸಂಭಾಷಣೆ ಇದೆ’ ಎಂದು ಪಾಟೀಲ್‌ ಹೇಳಿದ್ದಾರೆ.

ಈ ಮಧ್ಯೆ ನಾನಾ ಪಟೋಲೆ ಮತ್ತು ಸುಪ್ರಿಯಾ ಸುಳೆ ಅವರದ್ದು ಎನ್ನಲಾದ ಧ್ವನಿ ಮುದ್ರಿಕೆಗಳನ್ನು (ವಾಯ್ಸ್‌ ನೋಟ್‌) ಬಿಜೆಪಿ ಮಂಗಳವಾರ ಬಿಡುಗಡೆ ಮಾಡಿದೆ. 

ADVERTISEMENT

ಪಾಟೀಲ್ ಆರೋಪ ಏನು?

ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್‌, ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿರುವುದಾಗಿ ಬುಧವಾರ ತಿಳಿಸಿದರು.

‘2018ರಲ್ಲಿ ದಾಖಲಾಗಿದ್ದ ಕ್ರಿಪ್ಟೋಕರೆನ್ಸಿ ಪ್ರಕರಣದ ತನಿಖೆಗೆ ನೆರವು ನೀಡಲು ನನ್ನ ಮತ್ತು ಸೈಬರ್ ಪರಿಣತ ಪಂಕಜ್ ಘೋಡೆ ಅವರನ್ನು ಪುಣೆ ಪೊಲೀಸ್ ಅಧಿಕಾರಿಗಳು ನೇಮಿಸಿದ್ದರು’ ಎಂದು ತಿಳಿಸಿದರು.

‘2022ರಲ್ಲಿ ಅಮಿತಾಭ್ ಗುಪ್ತಾ ಅವರು ಪುಣೆಯ ಆಯುಕ್ತರಾದ ನಂತರ, ತನಿಖಾಧಿಕಾರಿಗಳಿಗೆ ವಂಚಿಸಿದ ಆರೋಪದ ಮೇಲೆ ನನ್ನ ಮತ್ತು ಘೋಡೆ ಅವರನ್ನು ಬಂಧಿಸಲಾಯಿತು. ಸುಳ್ಳು ಪ್ರಕರಣದಲ್ಲಿ ನನ್ನನ್ನು ಬಂಧಿಸಲಾಗಿತ್ತು’ ಎಂದು ಪಾಟೀಲ್‌ ಹೇಳಿದರು.

‘ಪ್ರಕರಣದ ಸಂಬಂಧ 14 ತಿಂಗಳು ಜೈಲಿನಲ್ಲಿ ಇದ್ದೆ. ಈ ವರ್ಷ ನವೆಂಬರ್ 17ರಂದು ‘ಸಿಗ್ನಲ್‌ ಆ್ಯಪ್‌’ನ ನನ್ನ ಖಾತೆಗೆ ನಿರಂತರವಾಗಿ ಕರೆಗಳು ಬರುತ್ತಿದ್ದವು. ನಂಬರ್‌ ಪರಿಶೀಲಿಸಿದಾಗ ಅದು ವಿಧಿವಿಜ್ಞಾನ ತಜ್ಞ ಗೌರವ್‌ ಮೆಹ್ತಾ ಅವರದ್ದು ಎಂದು ತಿಳಿದುಬಂತು. ಮೆಹ್ತಾ ಅವರು ನನ್ನ ವಿರುದ್ಧದ ತನಿಖೆಗೆ ಪೊಲೀಸರಿಗೆ ನೆರವು ನೀಡಿದ್ದರು’ ಎಂದು ಆರೋಪಿಸಿದರು. 

ಮೆಹ್ತಾ ಅವರು ಸಿಗ್ನಲ್‌ ಆ್ಯಪ್‌ ಮೂಲಕ 10 ಧ್ವನಿ ಮುದ್ರಿಕೆಗಳನ್ನು (ವಾಯ್ಸ್‌ ನೋಟ್‌) ಕಳುಹಿಸಿದ್ದಾರೆ. ಅವುಗಳಲ್ಲಿ ಸುಪ್ರಿಯಾ ಸುಳೆ, ನಾನಾ ಪಟೋಲೆ ಮತ್ತು ಐಪಿಎಸ್‌ ಅಧಿಕಾರಿಗಳಾದ ಅಮಿತಾಭ್‌ ಗುಪ್ತಾ ಮತ್ತು ಭಾಗ್ಯಶ್ರೀ ನವಠಕೆ ಅವರದ್ದು ಎನ್ನಲಾದ ಧ್ವನಿ ಇದೆ ಎಂದು ಹೇಳಿದರು.

ಈ ಪೈಕಿ ಮೂರು ಧ್ವನಿ ಮುದ್ರಿಕೆಗಳು ಸುಪ್ರಿಯಾ ಸುಳೆ ಅವರು ಮೆಹ್ತಾ ಅವರಿಗೆ ಕಳುಹಿಸಿರುವುದಾಗಿದೆ. ಅವುಗಳಲ್ಲಿ ಸುಪ್ರಿಯಾ ಅವರು, ಚುನಾವಣೆಗೆ ಅಗತ್ಯವಿರುವ ಕಾರಣ ಬಿಟ್‌ಕಾಯಿನ್‌ಗಳನ್ನು ನಗದಾಗಿ ಪರಿವರ್ತಿಸುವಂತೆ ಕೇಳಿದ್ದಾರೆ ಮತ್ತು ‘ತನಿಖೆ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ಒಮ್ಮೆ ಅಧಿಕಾರಕ್ಕೆ ಬಂದ ನಂತರ ಎಲ್ಲವನ್ನೂ ನಿಭಾಯಿಸುತ್ತೇನೆ’ ಎಂದು ಭರವಸೆ ನೀಡಿದ್ದಾರೆ ಎಂದು ಪಾಟೀಲ್ ಆರೋಪಿಸಿದರು.

ಮತ್ತೆ ಮೂರು ವಾಯ್ಸ್‌ ನೋಟ್‌ಗಳಲ್ಲಿ ನಾನಾ ಪಟೋಲೆ ಅವರು ಅಮಿತಾಭ್‌ ಗುಪ್ತಾ ಅವರ ಬಳಿ ‘ಹಣ ಸ್ವೀಕರಿಸಿಲ್ಲ, ಈ ವಿಚಾರದಲ್ಲಿ ತಮಾಷೆ ಬೇಡ’ ಎಂದು ಹೇಳಿರುವಂತೆ ಕೇಳುತ್ತದೆ ಎಂದು ತಿಳಿಸಿದರು.

ಮತ್ತೊಂದು ವಾಯ್ಸ್‌ ನೋಟ್‌ನಲ್ಲಿ ಗುಪ್ತಾ ಅವರು ಬಿಟ್‌ಕಾಯಿನ್‌ಗಳನ್ನು ನಗದಾಗಿ ಪರಿವರ್ತಿಸುವಂತೆ ಮೆಹ್ತಾ ಅವರಿಗೆ ಸೂಚನೆ ನೀಡಿರುವಂತಿದೆ ಎಂದು ಆರೋಪಿಸಿದರು.

ಆಯೋಗಕ್ಕೆ ಕಳುಹಿಸಿದ ದೂರಿನಲ್ಲಿ ಏನಿದೆ?

ಪಾಟೀಲ್ ಅವರು ಚುನಾವಣಾ ಆಯೋಗಕ್ಕೆ ಇ–ಮೇಲ್‌ ಮೂಲಕ ಕಳುಹಿಸಿರುವ ದೂರಿನಲ್ಲಿ, ‘ವಶದಲ್ಲಿರುವ ಚಾಟ್‌ ಸಂದೇಶಗಳ ಪ್ರಕಾರ, ಕಳೆದ ಲೋಕಸಭಾ ಚುನಾವಣೆ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ನೂರಾರು ಬಿಟ್‌ಕಾಯಿನ್‌ಗಳು ಬಳಕೆಯಾಗಿರುವ ಸಾಧ್ಯತೆ ಇದೆ’ ಎಂದು ತಿಳಿಸಿದ್ದಾರೆ.

ಮೆಹ್ತಾ ಅವರು ಈಗಲೂ ನೂರಾರು ಕೋಟಿ ರೂಪಾಯಿ ಮೌಲ್ಯದ ದುರುಪಯೋಗಪಡಿಸಿಕೊಂಡ ಬಿಟ್‌ಕಾಯಿನ್‌ಗಳನ್ನು  ಹೊಂದಿರುವ ಸಾಧ್ಯತೆ ಇದೆ ಎಂದು ದೂರಿದ್ದಾರೆ.

‘ಇದೊಂದು ಗಂಭೀರ ಕ್ರಿಮಿನಲ್‌ ಪ್ರಕರಣವಾಗಿದ್ದು, ತುರ್ತಾಗಿ ತನಿಖೆ ನಡೆಸಬೇಕೆಂದು ಕೋರುತ್ತೇನೆ ಮತ್ತು ತನಿಖೆಗೆ ಯಾವಾಗ ಕರೆದರೂ ಬೆಂಬಲ ನೀಡುತ್ತೇನೆ’ ಎಂದು ತಿಳಿಸಿದ್ದಾರೆ.

‘ನನ್ನ ಬಳಿ ಇರುವ ದಾಖಲೆಗಳ ಆಧಾರದಲ್ಲಿ ಹೈಕೋರ್ಟ್‌ ಮೆಟ್ಟಿಲೇರಿ ಪ್ರಕರಣವನ್ನು ಸಿಬಿಐ ತನಿಖೆಗೆ ನಿರ್ದೇಶನ ನೀಡುವಂತೆ ಕೋರುತ್ತೇನೆ. ಸಾಕ್ಷಿಯಾಗಿ ತನಿಖೆಗೆ ಸಹಕರಿಸಲು ನಾನು ಸದಾ ಸಿದ್ಧ’ ಎಂದು ಹೇಳಿದ್ದಾರೆ.

ಸುಳೆ ಪಟೋಲೆ ವಿರುದ್ಧ ಬಿಜೆಪಿ ವಾಗ್ದಾಳಿ

ಮಹಾ ವಿಕಾಸ ಆಘಾಡಿ (ಎಂವಿಎ) ನಾಯಕರಾದ ಸುಪ್ರಿಯಾ ಸುಳೆ ಮತ್ತು ನಾನಾ ಪಟೋಲೆ ಅವರು ಬಿಟ್‌ಕಾಯಿನ್‌ ಅಕ್ರಮದಲ್ಲಿ ಭಾಗಿಯಾಗಿ ಈ ಹಣವನ್ನು ಚುನಾವಣಾ ಪ್ರಚಾರಕ್ಕೆ ಬಳಸಿದ್ದಾರೆ ಎಂಬ ಆರೋಪ ವಿಚಾರವಾಗಿ ಬಿಜೆಪಿ ಬುಧವಾರ ತೀವ್ರ ವಾಗ್ದಾಳಿ ನಡೆಸಿತು.

ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ಅವರು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ರಾಹುಲ್‌ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ಹರಿಹಾಯ್ದರು.

ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್‌ ಅವರು ಈ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಲಿ ಎಂದು ಸವಾಲು ಹಾಕಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಪಿತೂರಿ’ ಹಿಂದೆ ಬಿಜೆಪಿ ಇದೆ ಎಂಬ ವಿಪಕ್ಷಗಳ ಆರೋಪವನ್ನು ತಳ್ಳಿಹಾಕಿದರು.

ಕ್ರಿಪ್ಟೊಕರೆನ್ಸಿ ವಂಚನೆ ಪ್ರಕರಣವು ವರ್ಷಗಳ ಹಿಂದೆ ನಡೆದಿದೆ. ವಿರೋಧ ಪಕ್ಷಗಳ ಒಕ್ಕೂಟವು ಈ ಹಣವನ್ನು ಈ ಹಿಂದಿನ ಚುನಾವಣಾ ಪ್ರಚಾರಗಳಿಗೂ ಬಳಸಿಕೊಂಡಿದೆ’ ಎಂದು ಆರೋಪಿಸಿದರು. ಹಗರಣದಲ್ಲಿ ₹235 ಕೋಟಿ ಅಕ್ರಮ ನಡೆದಂತಿದೆ ಎಂದು ಹೇಳಿದರು.

ಸುಳ್ಳು ಆರೋಪ: ಪಟೋಲೆ 

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಬಿಟ್‌ಕಾಯಿನ್‌ ವಂಚನೆ ಪ್ರಕರಣದಲ್ಲಿ ತಮ್ಮ ಹೆಸರನ್ನು ಎಳೆದುತರಲಾಗಿದೆ ಎಂದು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ನಾನಾ ಪಟೋಲೆ ಅವರು ಬಿಜೆಪಿ ವಿರುದ್ಧ ಕಿಡಿಕಾರಿದರು.

‘ನನ್ನ ವಿರುದ್ಧದ ಸುಳ್ಳು ಆರೋಪಗಳ ವಿರುದ್ಧ ಕಾನೂನು ಮೂಲಕ ಹೋರಾಡುತ್ತೇನೆ’ ಎಂದು ಅವರು ಹೇಳಿದರು. ಮತ ಚಲಾವಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ನಾನೊಬ್ಬ ರೈತ. ಬಿಟ್‌ಕಾಯಿನ್‌ಗಳ ಅಗತ್ಯ ನನಗೆ ಇಲ್ಲ’ ಎಂದು ಹೇಳಿದರು.

‘ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೊದಲ್ಲಿ ಇರುವ ಧ್ವನಿ ನನ್ನದಲ್ಲ. ಪ್ರಧಾನಿ (ನರೇಂದ್ರ ಮೋದಿ) ಸಹ ನನ್ನ ಧ್ವನಿಯನ್ನು ಗುರುತಿಸುತ್ತಾರೆ. ಆರೋಪ ಮಾಡುತ್ತಿರುವ ರವೀಂದ್ರ ಪಾಟೀಲ್‌ ಐಪಿಎಸ್‌ ಅಧಿಕಾರಿ ಆಗಿದ್ದವರು. ಅವರು ಜೈಲಿಗೂ ಹೋಗಿದ್ದರು’ ಎಂದು ಹೇಳಿದರು.

ಬಿಜೆಪಿಯ ಸುಧಾಂಶು ತ್ರಿವೇದಿ ಮತ್ತಿತರರ ವಿರುದ್ಧ ಸುಳ್ಳು ಆರೋಪ ಮತ್ತು ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ ಎಂದರು.

ಆರೋಪ ನಿರಾಕರಿಸಿದ ಸುಪ್ರಿಯಾ ಸುಳೆ

ಸುಪ್ರಿಯಾ ಸುಳೆ ಅವರು ವಾಯ್ಸ್‌ ನೋಟ್‌ಗಳು ಸೇರಿದಂತೆ ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ. ಈ ಸಂಬಂಧ ಚುನಾವಣಾ ಆಯೋಗ ಮತ್ತು ಮಹಾರಾಷ್ಟ್ರ ಪೊಲೀಸ್‌ ಬಳಿ ದೂರು ದಾಖಲಿಸಿದ್ದಾರೆ. ‘ಅಮಾಯಕ ಮತದಾರರನ್ನು ಕುತಂತ್ರದ ಮೂಲಕ ಸೆಳೆಯಲು ಸುಳ್ಳುಸುದ್ದಿ ಹರಡುತ್ತಿರುವುದು ಗೊತ್ತಿರುವ ವಿಷಯ’ ಎಂದು ಅವರು ತಿರುಗೇಟು ನೀಡಿದ್ದಾರೆ.

‘ದುರುದ್ದೇಶಪೂರಿತ ಕುತಂತ್ರಿಗಳು ಇದರ ಹಿಂದೆ ಇರುವುದು ಸ್ಪಷ್ಟವಾಗಿದೆ. ಸಂವಿಧಾನದ ಮಾರ್ಗದರ್ಶನದಡಿ ಕಾರ್ಯನಿರ್ವಹಿಸುವ ಆರೋಗ್ಯಕರ ಪ್ರಜಾಪ್ರಭುತ್ವದಲ್ಲಿ ಇಂತಹುದು ನಡೆಯುವುದು ಖಂಡನಾರ್ಹ’ ಎಂದು  ‘ಎಕ್ಸ್‌’ನಲ್ಲಿ ಹೇಳಿದ್ದಾರೆ.

ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಪ್ರಿಯಾ ಸುಳೆ ‘ಬಿಜೆಪಿಯ ಆರೋಪಗಳಿಗೆ ನನ್ನ ಉತ್ತರ ‘ಇಲ್ಲ’ ಎಂಬುದೇ ಆಗಿದೆ. ಆಡಿಯೊದಲ್ಲಿರುವುದು ನನ್ನ ಧ್ವನಿ ಅಲ್ಲ. ಯಾರು ಬೇಕಾದರೂ ಪರಿಶೀಲಿಸಬಹುದು. ನನಗೂ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಬಿಜೆಪಿಯ ಎಲ್ಲ ಆರೋಪಗಳಿಗೆ ಉತ್ತರ ನೀಡಲು ಸಿದ್ಧ’ ಎಂದು ಹೇಳಿದ್ದಾರೆ.

ಗೌರವ್‌ ಮೆಹ್ತಾಗೆ ಸಂಬಂಧಿತ ಜಾಗಗಳಲ್ಲಿ ಇ.ಡಿ ದಾಳಿ

ಪ್ರಕರಣಕ್ಕೆ ಸಂಬಂಧಿಸಿದಂತೆ ಗೌರವ್‌ ಮೆಹ್ತಾ ಅವರಿಗೆ ಸಂಬಂಧಿಸಿದ ಛತ್ತೀಸಗಢದಲ್ಲಿರುವ ಪ್ರದೇಶಗಳಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬುಧವಾರ ಶೋಧ ನಡೆಸಿದರು.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಛತ್ತೀಸಗಢದ ರಾಜಧಾನಿ ರಾಯಪುರದಲ್ಲಿ ಕಾರ್ಯಾಚರಣೆ ನಡೆಸಿದರು. ತಿಂಗಳಿಗೆ  ಶೇ 10ರಷ್ಟು ರಿಟರ್ನ್ ನೀಡುವುದಾಗಿ ಸುಳ್ಳು ಭರವಸೆ ನೀಡಿ ಸಾರ್ವಜನಿಕರಿಂದ ಬಿಟ್‌ಕಾಯಿನ್‌ಗಳ ರೂಪದಲ್ಲಿ (2017ರಲ್ಲಿ ₹6600 ಕೋಟಿ ಮೌಲ್ಯವಿತ್ತು) ಬೃಹತ್ ಮೊತ್ತದ ಹಣವನ್ನು ಸಂಗ್ರಹಿಸಿರುವ ಆರೋಪದ ಮೇಲೆ ಮೆಹ್ತಾ ಮತ್ತು ಇತರ ಕೆಲವರ ವಿರುದ್ಧ ಇ.ಡಿ ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಆರೋಪ ಮಾಡಿರುವ ವ್ಯಕ್ತಿ ಜೈಲಿನಲ್ಲಿದ್ದರು. ಬಿಜೆಪಿ ಎಷ್ಟು ಕೀಳುಮಟ್ಟಕ್ಕೆ ಇಳಿದಿದೆ ಎಂದು ಇದು ತೋರಿಸುತ್ತದೆ.
ಶರದ್‌ ಪವಾರ್, ಎನ್‌ಸಿಪಿ ಅಧ್ಯಕ್ಷ
ನನಾ ಪಟೋಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.