ADVERTISEMENT

ಬಿಹಾರದಲ್ಲಿ ದೇಗುಲ ಪ್ರವೇಶಿಸಿದ ಮುಸ್ಲಿಂ ಸಚಿವ: ಬಿಜೆಪಿ ಆಕ್ರೋಶ

ಪಿಟಿಐ
Published 23 ಆಗಸ್ಟ್ 2022, 16:26 IST
Last Updated 23 ಆಗಸ್ಟ್ 2022, 16:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಗಯಾದ ವಿಷ್ಣುಪಾದ ದೇವಾಲಯಕ್ಕೆ ಮುಸ್ಲಿಂ ಸಚಿವ ಮೊಹಮ್ಮದ್ ಇಸ್ರೇಲ್ ಮನ್ಸೂರಿ ಅವರೊಂದಿಗೆ ಪ್ರವೇಶಿಸುವ ಮೂಲಕ ಹಿಂದೂಗಳ ಭಾವನೆಗಳಿಗೆ ಉದ್ದೇಶಪೂರ್ವಕವಾಗಿ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಮಂಗಳವಾರ ಆರೋಪಿಸಿದೆ.

ನಿತೀಶ್‌ ಅವರು ಸೋಮವಾರ ಮನ್ಸೂರಿ ಅವರೊಂದಿಗೆ ದೇವಾಲಯಕ್ಕೆ ಭೇಟಿ ನೀಡಿದ್ದರು. ಬಳಿಕ ಮನ್ಸೂರಿ ಅವರು, ‘ಗೌರವಾನ್ವಿತ ಮುಖ್ಯಮಂತ್ರಿಯೊಂದಿಗೆ ದೇವಸ್ಥಾನ ದರ್ಶನಕ್ಕೆ ಅವಕಾಶ ಸಿಕ್ಕಿದ್ದಕ್ಕೆ ಕೃತಾರ್ಥನಾಗಿದ್ದೇನೆ’ ಎಂದು ಹೇಳಿದ್ದರು. ಮನ್ಸೂರಿ ಅವರು ಗಯಾದ ಉಸ್ತುವಾರಿ ಸಚಿವರಾಗಿದ್ದಾರೆ.

‘ಮುಖ್ಯಮಂತ್ರಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿರುವ ಬಿಹಾರದ ಬಿಜೆಪಿ ಅಧ್ಯಕ್ಷ ಸಂಜಯ್‌ ಜೈಸ್ವಾಲ್‌, ‘ಸಹಿಷ್ಣುತೆಯ ಹೆಸರಿನಲ್ಲಿ ಹಿಂದೂಗಳು ಯಾವಾಗಲೂ ತಮ್ಮ ಧಾರ್ಮಿಕ ಭಾವನೆಗಳ ಜೊತೆಗೆ ಯಾಕೆ ರಾಜಿ ಮಾಡಿಕೊಳ್ಳಬೇಕು’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

‘ಮುಖ್ಯಮಂತ್ರಿ ಕ್ಷಮೆಯಾಚಿಸದಿದ್ದರೆ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ಎದುರಿಸಬೇಕಾದೀತು’ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.

‘ಮನ್ಸೂರಿ ಅವರ ದೇವಾಲಯ ಪ್ರವೇಶದ ಬಗ್ಗೆ ನಮಗೆ ತಿಳಿದಿರಲಿಲ್ಲ. ದೇವಾಲಯದ ಆವರಣದಲ್ಲಿ ‘ಸನಾತನ ಧರ್ಮದಲ್ಲಿ ನಂಬಿಕೆ ಇರುವವರು ಮಾತ್ರ ಪ್ರವೇಶಿಸಬಹುದು’ ಎಂಬ ಫಲಕವಿದೆ. ಇಂತಹದ್ದನ್ನು ತಪ್ಪಿಸಬೇಕು’ ಎಂದು ದೇವಾಲಯದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.