ಅಶೋಕನಗರ (ಪಿಟಿಐ): ಜಲಪೈಗುರಿಯ ರಾಮಕೃಷ್ಣ ಮಿಷನ್ನ ಮೇಲೆ ನಡೆದ ದಾಳಿಯಲ್ಲಿ ಟಿಎಂಸಿಯ ಪಾತ್ರವಿದೆ ಎಂದು ಬಿಜೆಪಿ ಆರೋಪಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಭೂ ವಿವಾದದ ಸಂಬಂಧ ನಡೆದ ಘಟನೆಯನ್ನು ಕೇಸರಿ ಪಾಳಯವು ತಮ್ಮ ಪಕ್ಷದೊಂದಿಗೆ ತಳಕು ಹಾಕಲು ಪ್ರಯತ್ನಿಸುತ್ತಿದೆ’ ಎಂದು ಮಂಗಳವಾರ ಹೇಳಿದ್ದಾರೆ.
ಬರಸಾತ್ ಲೋಕಸಭಾ ಕ್ಷೇತ್ರದಲ್ಲಿ ರ್ಯಾಲಿ ನಡೆಸಿದ ಅವರು, ‘ನಾನು ಎಂದೂ ಧಾರ್ಮಿಕ ಕೇಂದ್ರಗಳ ನಡುವೆ ತಾರತಮ್ಯ ಮಾಡಿಲ್ಲ. ಎಲ್ಲ ಧರ್ಮಗಳ ಪೂಜಾ ಸ್ಥಳಗಳನ್ನೂ ನಾನು ನವೀಕರಣ ಮಾಡಿಸಿದ್ದೇನೆ. ಸಿಸ್ಟರ್ ನಿವೇದಿತಾ ಅವರ ಮನೆ, ವಿವೇಕಾನಂದರ ಜನ್ಮಸ್ಥಳದ ನವೀಕರಣ ಕಾರ್ಯ ಮಾಡಿದ್ದೇನೆ. ರಾಮಕೃಷ್ಣ ಮಿಷನ್ ಸೇರಿದಂತೆ ಹಲವು ಸಾಮಾಜಿಕ ಧಾರ್ಮಿಕ ಸಂಸ್ಥೆಗಳನ್ನು ಬೆಂಬಲಿಸಿದ್ದೇನೆ’ ಎಂದು ಹೇಳಿದರು.
‘ಅನೇಕರು ತಮ್ಮ ಆಸ್ತಿಯನ್ನು ಧಾರ್ಮಿಕ ಕಾರಣಗಳಿಗಾಗಿ ದಾನ ಮಾಡುತ್ತಾರೆ ಮತ್ತು ಅದರಿಂದ ಕೆಲವು ವಿವಾದಗಳು ಹುಟ್ಟಿಕೊಂಡಿರಬಹುದು. ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು. ಆದರೆ, ಘಟನೆಯ ಬಗ್ಗೆ ಸರಿಯಾದ ಮಾಹಿತಿ ತಿಳಿಯದೇ ಒಬ್ಬರನ್ನು ಅದರಲ್ಲಿ ಸಿಕ್ಕಿಸಿ ಹಾಕಲು ನಿಮಗೆ (ಬಿಜೆಪಿ) ಎಷ್ಟು ಧೈರ್ಯ’ ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.