
ನವದೆಹಲಿ: ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಮಾಜಿ ಅಧ್ಯಕ್ಷ ಬ್ರಿಜ್ಭೂಷಣ್ ಶರಣ್ ಸಿಂಗ್ ಪ್ರತಿನಿಧಿಸುತ್ತಿದ್ದ ಉತ್ತರ ಪ್ರದೇಶದ ಕೈಸರ್ಗಂಜ್ ಕ್ಷೇತ್ರದಿಂದ ಅವರ ಮಗ ಕರಣ್ ಭೂಷಣ್ ಸಿಂಗ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.
2009ರಿಂದ ಇದೇ ಮೊದಲ ಬಾರಿಗೆ ಈ ಕ್ಷೇತ್ರದ ಹಾಲಿ ಸಂಸದ, ಪ್ರಭಾವಿ ನಾಯಕರಾಗಿದ್ದ ಬ್ರಿಜ್ಭೂಷಣ್ ಅವರನ್ನು ಬಿಜೆಪಿ ಕಣದಿಂದ ಹೊರಗಿಟ್ಟಿದೆ.
ಕರಣ್ ಭೂಷಣ್ ಸಿಂಗ್, ಬ್ರಿಜ್ಭೂಷಣ್ ಅವರ ಕಿರಿಯ ಮಗ. ಈ ಕ್ಷೇತ್ರದಲ್ಲಿ ಬ್ರಿಜ್ಭೂಷಣ್ ಮೂರು ಬಾರಿ ಗೆಲುವು ಸಾಧಿಸಿದ್ದರು. 2019ರಲ್ಲಿ 2 ಲಕ್ಷ ಮತಗಳ ಅಂತರದಿಂದ ಗೆಲುವು ಕಂಡಿದ್ದರು.
ಬಿಬಿಎ ಓದಿರುವ ಕರಣ್ ಸಿಂಗ್, ಆಸ್ಟ್ರೇಲಿಯಾದಲ್ಲಿ ಬಿಸಿನೆಸ್ ಮಾನೇಜ್ಮೆಂಟ್ ಡಿಪ್ಲೊಮಾ ಸಹ ಪಡೆದಿದ್ದಾರೆ.
ಕರಣ್ ಸಿಂಗ್ ಅವರು ಸದ್ಯ ಉತ್ತರ ಪ್ರದೇಶದ ಕುಸ್ತಿ ಫೆಡರೇಶನ್ ಅಧ್ಯಕ್ಷರಾಗಿದ್ದಾರೆ. ಗೊಂಡಾ ಜಿಲ್ಲೆಯ ನವಾಬ್ ಗಂಜ್ನ ಗ್ರಾಮೀಣ ಅಭಿವೃದ್ಧಿ ಸಹಕಾರ ಬ್ಯಾಂಕ್ ಅಧ್ಯಕ್ಷರೂ ಆಗಿದ್ದಾರೆ.
ಕೈಸರ್ಗಂಜ್ನಲ್ಲಿ 5ನೇ ಹಂತದಲ್ಲಿ ಮೇ 20ರಂದು ಮತದಾನ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.