ADVERTISEMENT

ಅರಬ್‌ ದೇಶಗಳ ಕ್ಷಮೆ ಯಾಚಿಸಬೇಕಿರುವುದು ಬಿಜೆಪಿಯೇ ಹೊರತು ಭಾರತವಲ್ಲ: ಕೆಟಿಆರ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜೂನ್ 2022, 13:03 IST
Last Updated 6 ಜೂನ್ 2022, 13:03 IST
ಕೆ.ಟಿ. ರಾಮರಾವ್
ಕೆ.ಟಿ. ರಾಮರಾವ್   

ಹೈದರಾಬಾದ್: ಹಗಲಿರುಳು ದ್ವೇಷ ಉಗುಳುತ್ತಿರುವ ಬಿಜೆಪಿಯವರು ಮೊದಲು ಭಾರತೀಯರ ಕ್ಷಮೆ ಕೇಳಬೇಕೆಂದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ (ಕೆಟಿಆರ್) ಒತ್ತಾಯಿಸಿದ್ದಾರೆ.

ಪ್ರವಾದಿ ಮಹಮ್ಮದ್‌ ಕುರಿತ ಅವಹೇಳನಕಾರಿ ಹೇಳಿಕೆ ಪ್ರಕರಣದ ಹಿನ್ನೆಲೆಯಲ್ಲಿ ಭಾರತವು ಕ್ಷಮೆಯಾಚಿಸಬೇಕೆಂದು ಅರಬ್‌ ರಾಷ್ಟ್ರಗಳು ಒತ್ತಾಯಿಸಿವೆ. ಈ ಕುರಿತು ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ಕೆಟಿಆರ್‌, ‘ಕ್ಷಮೆಯಾಚಿಸಬೇಕಿರುವುದು ಬಿಜೆಪಿಯೇ ಹೊರತು ಭಾರತವಲ್ಲ’ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರನ್ನು ಟ್ಯಾಗ್‌ ಮಾಡಿ ಟ್ವೀಟಿಸಿರುವ ಕೆಟಿಆರ್‌, ‘ಬಿಜೆಪಿಯ ಮತಾಂಧರು ಮಾಡಿರುವ ದ್ವೇಷ ಭಾಷಣಗಳಿಗೆ ಭಾರತವೇಕೆ ಕ್ಷಮೆಯಾಚಿಸಬೇಕು? ಹಗಲಿರುಳು ದ್ವೇಷ ಹರಡುತ್ತಿರುವುದಕ್ಕಾಗಿ ನಿಮ್ಮ ಪಕ್ಷವು ಮೊದಲು ಭಾರತೀಯರಲ್ಲಿ ಕ್ಷಮೆ ಕೇಳಲಿ’ ಎಂದು ಒತ್ತಾಯಿಸಿದ್ದಾರೆ.

ADVERTISEMENT

‘ಮೋದಿಜೀ, ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಅವರು ಮಹಾತ್ಮ ಗಾಂಧಿಯವರ ಹತ್ಯೆಯನ್ನು ಶ್ಲಾಘಿಸಿದಾಗ ನಿಮ್ಮ ಮೌನವು ಆಘಾತಕಾರಿಯಾಗಿತ್ತು. ಈ ಮೌನ ಸಮ್ಮತಿಯು ಧರ್ಮಾಂಧತೆ ಮತ್ತು ದ್ವೇಷವನ್ನು ಉತ್ತೇಜಿಸಿದೆ. ಇದು ಭಾರತಕ್ಕೆ ಸರಿಪಡಿಸಲಾಗದ ನಷ್ಟವನ್ನುಂಟು ಮಾಡಲಿದೆ’ ಎಂದು ಟಿಆರ್‌ಎಸ್ ನಾಯಕ ಬರೆದಿದ್ದಾರೆ.

ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್‌ ಶರ್ಮಾ ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮಹಮ್ಮದ್‌ ಅವರ ವಿರುದ್ಧ ಅವಹೇಳಕಾರಿಯಾಗಿ ಮಾತನಾಡಿರುವುದು ವಿವಾದ ಸೃಷ್ಟಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತವು ಕ್ಷಮೆಯಾಚಿಸಬೇಕೆಂದು ಅರಬ್‌ ದೇಶಗಳು ಒತ್ತಾಯಿಸಿವೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.