ಕೋಲ್ಕತ್ತ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸದಂತೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರಿಗೆ ಮನವಿ ಮಾಡಿರುವ ಬಿಜೆಪಿ ನಾಯಕ ರಾಜೀವ್ ಬ್ಯಾನರ್ಜಿ, ಜನ ಸಾಮಾನ್ಯರ ಸಮಸ್ಯೆಗಳತ್ತ ಗಮನಹರಿಸುವಂತೆ ತಿಳಿಸಿದ್ದಾರೆ.
ಇಲ್ಲಿ ಗಮನಾರ್ಹ ಅಂಶವೆಂದರೆ ಅವರಿಬ್ಬರು ಹಿಂದೆ ಮಮತಾರ ಆಪ್ತರಾಗಿ ಗುರುತಿಸಿಕೊಂಡಿದ್ದರು. ಬಳಿಕ ಭಿನ್ನಮತ ಸ್ಫೋಟಗೊಂಡ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಈ ಪೈಕಿ ಸುವೇಂದು ಅಧಿಕಾರಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಜಯಭೇರಿ ಮೊಳಗಿಸಿದ್ದರು. ಅತ್ತ ರಾಜೀವ್ ಬ್ಯಾನರ್ಜಿ ಸೋಲಿಗೆ ಶರಣಾಗಿದ್ದರು.
ಜನಾದೇಶವನ್ನು ಪಡೆದ ಮುಖ್ಯಮಂತ್ರಿ ವಿರುದ್ಧ ನ್ಯಾಯಯುತವಲ್ಲದ ವಾಗ್ದಾಳಿ ಮುಂದುವರಿಸದಂತೆ ನಾನು ವಿರೋಧ ಪಕ್ಷದ ನಾಯಕರನ್ನು ಒತ್ತಾಯಿಸುತ್ತೇನೆ. ಪಶ್ಚಿಮ ಬಂಗಾಳದ ಜನತೆ 213 ಸ್ಥಾನಗಳನ್ನು ನೀಡಿ ಗೆಲ್ಲಿಸಿದ್ದಾರೆ. ಸಿಎಂ ವಿರುದ್ಧ ದಾಳಿ ಮಾಡುವ ಬದಲು ಪೆಟ್ರೋಲ್, ಡೀಸೆಲ್ ಹಾಗೂ ಎಲ್ಪಿಜಿ ಬೆಲೆ ಏರಿಕೆಯು ಜನರು ಮೇಲೆ ಮತ್ತಷ್ಟು ಪರಿಣಾಮ ಬೀರದಂತೆ ನೋಡಿಕೊಳ್ಳಲು ಪ್ರಯತ್ನಿಸಿ ಎಂದು ಸುವೇಂದು ಅಧಿಕಾರಿ ಅವರಿಗೆ ಸಲಹೆ ಮಾಡಿದ್ದಾರೆ.
ರಾಜೀವ್ ಬ್ಯಾನರ್ಜಿ ಹೇಳಿಕೆಯನ್ನು ತೃಣಮೂಲ ಕಾಂಗ್ರೆಸ್ ವಕ್ತಾರ ಕುನಾಲ್ ಘೋಷ್ ಸ್ವಾಗತಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.